ಮಂಡ್ಯ ನಗರದ ರೈತ ಸಭಾಂಗಣದಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಯೋನಿವೃತ್ತಿ ಹೊಂದಿದ ಮಿಮ್ಸ್ ಪಿಆರ್ ಓ ಚ.ಮ.ಉಮೇಶ್ಬಾಬು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಜಿಲ್ಲಾಸ್ಪತ್ರೆ ಅಥವಾ ಮೆಡಿಕಲ್ ಕಾಲೇಜು ಎಂದರೆ ಅಲ್ಲಿ ಜನರಿಗೆ ಉತ್ತಮ ಚಿಕಿತ್ಸೆ ಸಿಗುತ್ತದೆ. ಯಾವುದೇ ನಗರದಲ್ಲಿ ಒಂದು ದೊಡ್ಡ ಮೆಡಿಕಲ್ ಕಾಲೇಜು ಇದ್ದರೆ ಅಲ್ಲಿ ಸಮೃದ್ಧಿಯಾಗಿ ಚಿಕಿತ್ಸೆ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಾಸನದಲ್ಲಿ ದೊಡ್ಡ ಆಸ್ಪತ್ರೆಯಿದೆ, ಅಲ್ಲಿನವರು ಬೆಂಗಳೂರು ಸೇರಿದಂತೆ ಇತರೆ ನಗರಕ್ಕೆ ಚಿಕಿತ್ಸೆಗೆಂದು ಹೋಗುವುದು ತುಂಬಾ ವಿರಳವಾಗಿದೆ. ಅಲ್ಲಿನ ಜನಪ್ರತಿನಿಧಿಗಳು ಉತ್ತಮವಾದ ಚಿಕಿತ್ಸೆ ಹಾಸನ ಜನರಿಗೆ ಬೇಕು ಎಂಬ ನಿಟ್ಟಿನಲ್ಲಿ ಸೌಲಭ್ಯವನ್ನು ಹಠ ಹಿಡಿದು ಕಲ್ಪಿಸಿದ್ಧಾರೆ, ಇತ್ತೀಚೆಗೆ ಮಂಡ್ಯ ನಗರದ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಮಿಮ್ಸ್ನಲ್ಲಿ ವೈದ್ಯರು ಹಗಲು ರಾತ್ರಿ ಎನ್ನದೇ ಸೇವೆ ನೀಡಿ ಜನರ ಮನ್ನಣೆ ಗಳಿಸಿರುವುದು ಶ್ಲಾಘನೀಯವಾಗಿದೆ. ಅಲ್ಲಿನ ಆಡಳಿತದಲ್ಲಿ ಸೇವೆ ಸಲ್ಲಿಸಿರುವವರಲ್ಲಿ ಚ.ಮ.ಉಮೇಶ್ ಬಾಬು ಒಬ್ಬರು. ಇವರ ಸೇವೆ ಮತ್ತೆ ಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಡಿಎಚ್ಒ ಡಾ.ಟಿ.ಎನ್.ಧನಂಜಯ ಮಾತನಾಡಿ, ನಮ್ಮ ಸಿಬ್ಬಂದಿ ಉಮೇಶ್ ಅವರು ಜನರಿಗೆ ಬೇಗ ಸ್ಪಂದನೆ ನೀಡುತ್ತಿದ್ದರು. ವೈದ್ಯರ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸಿ ರೋಗಿಗಳಿಗೆ ನೆರವಾಗಿದ್ಧಾರೆ, ಇವರು ವಯೋನಿವೃತ್ತಿಯಾಗಿದ್ದರೂ ಕೂಡ ಅಲ್ಲಿ ಸೇವೆ ಸಲ್ಲಿಸಲು ಆರೋಗ್ಯ ಸಚಿವರಿಗೆ ಮನವಿ ನೀಡಲಾಗುವುದು. ಇದರ ಜೊತೆಗೆ ಇವರ ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ವಯೋನಿವೃತ್ತಿ ಹೊಂದಿದ ಚ.ಮ.ಉಮೇಶ್ಬಾಬು ಹಾಗೂ ತಾಯಿ ನಾಗಮ್ಮ ಮರೀಗೌಡರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸಂಸ್ಥಾಪಕ ಡಿ.ರವಿಕುಮಾರ್, ಜಿಲ್ಲಾಧ್ಯಕ್ಷ ಎ.ಸಿ.ರಮೇಶ್, ಡಾ.ಅಶ್ವಥ್, ಬಿ.ಎಸ್.ಅನುಪಮಾ ಭಾಗವಹಿಸಿದ್ದರು.