ಮಂಡ್ಯ ತಾಲ್ಲೂಕಿನ ಎಸ್.ಐ.ಕೋಡಿಹಳ್ಳಿಯ ಬಳಿ ಚಿಕ್ಕ ಬಾಣಸವಾಡಿ ಶಿವರಾಮು ಎಂಬುವವರ ಎತ್ತು ಹೃದಯಾಘಾತದಿಂದ ಮೃತಪಟ್ಟಿದ್ದು, ಆ ಸಮಯದಲ್ಲಿ ಕ್ಷೇತ್ರ ಭೇಟಿಯಲ್ಲಿದ್ದ ಶಾಸಕ ಪಿ.ರವಿಕುಮಾರ್ ಗಣಿಗ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದು ವೈಯಕ್ತಿಕವಾಗಿ ₹ 20,000 ಗಳನ್ನು ಪರಿಹಾರವಾಗಿ ರೈತನಿಗೆ ವಿತರಿಸಿದರು.
ಮೊದಲಿಗೆ ಶಾಸಕರು, ಸರ್ಕಾರದಿಂದ ಎತ್ತಿನ ಮಾಲೀಕರಿಗೆ ಪರಿಹಾರ ದೊರಕಿಸಿ ಕೊಡುವ ದೃಷ್ಠಿಯಿಂದ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿಯ ಮೂಲಕ ಸಂಪರ್ಕಿಸಿದರು. ಆದರೆ ಎತ್ತಿನ ಮಾಲೀಕ ಶಿವರಾಮು ಅವರು ಎತ್ತಿಗೆ ಯಾವುದೇ ವಿಮೆ ಮಾಡಿಸದ ಕಾರಣ ಪರಿಹಾರ ಲಭ್ಯವಿಲ್ಲ ಎಂಬ ಮಾಹಿತಿ ದೊರೆಯಿತು. ಇದರಿಂದ ಮನನೊಂದ ಶಾಸಕರು ಸ್ಥಳದಲ್ಲೇ ವೈಯಕ್ತಿಕ ಹಣ ₹20,000 ಗಳನ್ನು ಪರಿಹಾರವಾಗಿ ನೀಡಿದರು.
ಸ್ಥಳಕ್ಕೆ ಭೇಟಿ ನೀಡಿ ರೈತನ ಕಷ್ಟಕ್ಕೆ ಸ್ಪಂದಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂವಹನ ನಡೆಸಿ, ಆನಂತರ ಧನ ಸಹಾಯ ಮಾಡಿದ ಶಾಸಕರ ನಡೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.