ನಿಮಗೆ ಜಿಲ್ಲೆಯ ಮಗ ಬೇಕಾ? ಅಥವಾ ಹೊರಗಿನಿಂದ ಬಂದವರು ಬೇಕಾ? ಸಿಎಂ ಆಗಿ ಅಧಿಕಾರದಲ್ಲಿದ್ದಾಗಲೇ ಜಿಲ್ಲೆಗೆ ಏನು ಕೊಡುಗೆ ನೀಡಿಲ್ಲ. ಅನುಕಂಪ ಗಿಟ್ಟಿಸಿಕೊಳ್ಳಲು ಭಾವನಾತ್ಮಕ ಮಾತಿಗೆ ಮರುಳಾಗಬೇಡಿ ಎಂದು ಮದ್ದೂರು ಶಾಸಕ ಉದಯ್ ಹೇಳಿದರು.
ಮದ್ದೂರು ತಾಲೂಕಿನ ನಾನಾ ಗ್ರಾಮ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಪರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದರು.
ಸಾತನೂರು, ರಾಮನಗರ, ಮಧುಗಿರಿ, ಚಿಕ್ಕಬಳ್ಳಾಪುರ, ಚನ್ನಪಟ್ಟಣ ಮುಗಿಸಿ ಈಗ ಮಂಡ್ಯಕ್ಕೆ ಬಂದಿದ್ದಾರೆ
ಹೋದಕಡೆಯಲೆಲ್ಲ ಇದು ನನ್ನ ಕರ್ಮ ಭೂಮಿ ಎನ್ನುತ್ತಾರೆ. ಚುನಾವಣೆ ನಂತರ ಮತ್ತೆಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ. ಏಳು ಕ್ಷೇತ್ರ ಗೆದ್ದು ಮುಖ್ಯಮಂತ್ರಿ ಆಗಿದ್ದರು ಜಿಲ್ಲೆಗೆ ಯಾವುದೇ ಶಾಶ್ವತ ಯೋಜನೆ ಕೊಟ್ಟಿಲ್ಲ ಎಂದರು.
ನಾವು ರೈತರ ಮಕ್ಕಳು ಅಂತಾರೆ, ಒಂದು ನಾಲೆಯನ್ನೂ ಅಭಿವೃದ್ಧಿ ಮಾಡಿಲ್ಲ, ಕಾವೇರಿಗೆ ನ್ಯಾಯ ಕೊಡಿಸಲಿಲ್ಲ. ಅವರು ಒಕ್ಕಲಿಗ ನಾಯಕರನ್ನು ಬೆಳೆಯಲು ಬಿಡುವುದಿಲ್ಲ. ಸ್ಟಾರ್ ಚಂದ್ರು ಅವರು ರಾಜಕೀಯ ಮಾಡಲು ಬಂದಿಲ್ಲ, ಜನಸೇವೆ ಮಾಡಲು ಬಂದಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದಂತೆ ಗ್ಯಾರಂಟಿ ಜಾರಿ ಮಾಡಲಾಗಿದ್ದು ಎಲ್ಲರಿಗೂ ತಲುಪುತ್ತಿದೆ. ಸ್ಟಾರ್ ಚಂದ್ರು ಬೆಂಬಲಿಸಿ ಕಾಂಗ್ರೆಸ್ ಶಕ್ತಿ ಹೆಚ್ಚಿಸಿ ಎಂದು ಕರೆಕೊಟ್ಟರು