ವರದಿ : ಪ್ರಭು
ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷವೊಂದರಿಂದ ಸ್ಪರ್ಧಿಸುವುದು ಶತಸಿದ್ಧ. ಯಾವ ಪಕ್ಷದಿಂದ ಅಭ್ಯರ್ಥಿ ಆಗುತ್ತೇನೆ ಎಂಬುದನ್ನು ಶೀಘ್ರ ಘೋಷಿಸುತ್ತೇನೆ ಎಂದು ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.
ಮದ್ದೂರು ಪಟ್ಟಣದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸಮಾಜಸೇವೆಯ ಮೂಲಕ ಜನರಿಗೆ ಹತ್ತಿರವಾಗಿದ್ದೇನೆ. ರಥಸಪ್ತಮಿಯ ದಿನವಾದ ಇಂದು ಚುನಾವಣಾ ಅಖಾಡಕ್ಕೆ ಅಧಿಕೃತವಾಗಿ ಪ್ರವೇಶ ಮಾಡುತ್ತಿರುವುದಾಗಿ ತಿಳಿಸಿದರು.
ಶೀಘ್ರ ಘೋಷಣೆ
ಕ್ಷೇತ್ರದಲ್ಲಿ ಮಾಡಿರುವ ಸಮಾಜ ಸೇವಾ ಕಾರ್ಯಗಳನ್ನು ಕಂಡ ಜನರು ರಾಜಕೀಯಕ್ಕೆ ಬರುವಂತೆ ಒತ್ತಾಯ ಮಾಡಿದರು.ಜನರ ಪ್ರೀತಿಪೂರ್ವಕ ಒತ್ತಾಯಕ್ಕೆ ಮಣಿದು ಮದ್ದೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದೆ. ನನ್ನೆಲ್ಲಾ ಹಿತೈಷಿಗಳು ಹಾಗೂ ಅಭಿಮಾನಿಗಳು ಒತ್ತಾಸೆಗೆ ಮಣಿದು ಸ್ಪರ್ಧೆ ಮಾಡುತ್ತಿರುವುದಾಗಿ ಹೇಳಿದರು. ಯಾರು ಸಹ ಯಾವುದೇ ಪಕ್ಷದಲ್ಲಿ ಶಾಶ್ವತವಾಗಿ ಇರುವುದಿಲ್ಲ. ನಾನು ಸಹ ಯಾವುದಾದರೊಂದು ರಾಷ್ಟ್ರೀಯ ಪಕ್ಷದಿಂದ ಸ್ಪರ್ಧೆ ಮಾಡುವುದು ಖಚಿತ ಎಂದರು.
ನನಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಕಾರ್ಯಕರ್ತರ ನಡುವೆ ಒಡನಾಟವಿದೆ. ಒಟ್ಟಾರೆ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆಯಲು ಮುಂದಾಗಿದ್ದೇನೆ. ಈ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಬೆಂಬಲಿಗರು ಮತ್ತು ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿ ಘೋಷಣೆ ಮಾಡುವುದಾಗಿ ತಿಳಿಸಿದರು.
ಕಾದು ನೋಡಿ
ಈಗಾಗಲೇ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಿದೆಯೇ ವಿನ: ಅಧಿಕೃತವಾಗಿ ಆಗಿಲ್ಲ.
ಕಾಂಗ್ರೆಸ್ ನಿಂದ ಗುರುಚರಣ್, ಬಿಜೆಪಿಯಿಂದ ಎಸ್.ಪಿ.ಸ್ವಾಮಿ ಸ್ಪರ್ಧೆಯಲ್ಲಿದ್ದಾರೆ. ನೀವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕದಲೂರು ಉದಯ್ ಅವರು, ಕೊನೆಯ ಕ್ಷಣದ ವರೆಗೂ ಯಾರು ಅಭ್ಯರ್ಥಿ ಎಂಬುವುದನ್ನು ಖಚಿತ ಪಡಿಸಲು ರಾಷ್ಟ್ರೀಯ ಪಕ್ಷಗಳಲ್ಲಿ ಸಾಧ್ಯವಿಲ್ಲ. ಕೊನೆಯ ಹಂತದಲ್ಲಿ ಅಭ್ಯರ್ಥಿ ಬದಲಾವಣೆ ಆಗಿರುವುದನ್ನು ನೋಡಿದ್ದೇವೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ ಎಂದ ಅವರು, ತಾವು ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಕಾದು ನೋಡಿ ಎಂದರು.
ನಾನು ರಾಜಕೀಯ ಉದ್ದೇಶದಿಂದ ತಾಲ್ಲೂಕಿಗೆ ಬಂದಿಲ್ಲ .ನಾನು ಬಡಜನರ ಸೇವೆಗಾಗಿ, ಯುವಜನರ
ನಿರುದ್ಯೋಗ ಸಮಸ್ಯೆ ಬಗೆಹರಿಸಲು ಬಂದಿದ್ದೇನೆ. ಜನರ ಬೆಂಬಲ ನನಗೆ ಸಿಕ್ಕಿದ್ದು,ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ಹೋಗುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿಪಾಯಿ ಶ್ರೀನಿವಾಸ್, ಕೆ.ಎಂ.ರವಿ, ಹರೀಶ್, ಮಧುಕುಮಾರ್ ಉಪಸ್ಥಿತರಿದ್ದರು.