ರಾಜ್ಯದ ನೀರಾವರಿ ಹಾಗೂ ಕೃಷಿ ಕ್ಷೇತ್ರದ ಸಮಸ್ಯೆಗಳ ನಿವಾರಣೆಗಾಗಿ ಹಲವು ದಶಕಗಳ ಕಾಲ ಹೋರಾಟ ನಡೆಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಶಕ್ತಿ ತುಂಬಲು ಎನ್.ಡಿ.ಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಮಾಜಿ ಶಾಸಕ ಎ.ಎಸ್ ರವೀಂದ್ರ ಶ್ರೀಕಂಠಯ್ಯ ಮನವಿ ಮಾಡಿದರು.
ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರಕೆರೆ, ಚಿಂದೇಗೌಡನ ಕೊಪ್ಪಲು, ಮಂಡ್ಯ ಕೊಪ್ಪಲು, ಗೆಂಡೆ ಹೊಸಹಳ್ಳಿ, ಮಣಿಗೌಡಗೌಡನ ಕೊಪ್ಪಲು, ಮಾಡ್ರಹಳ್ಳಿ, ಬಳ್ಳೇಕೆರೆ, ನೇರಳೆಕೆರೆ ಮುಂತಾದ ಗ್ರಾಮಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಕುಮಾರಸ್ವಾಮಿ ಗೆಲುವಿಗೆ ಮತದಾರರ ಮನವೊಲಿಸಬೇಕೆಂದು ಮನವಿ ಮಾಡಿದರು.
ತಮ್ಮ ಸ್ವಗ್ರಾಮ ಅರಕೆರೆ ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಆಯ್ದ ಬೀದಿಗಳಲ್ಲಿ ಸಂಚರಿಸಿ ಮನೆ-ಮನೆಗೆ ತೆರಳಿ ಮತಯಾಚಿಸಿದರು. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿ ನಲುಗಿದ್ದಾರೆ. ಬರಗಾಲದ ಬೇಗುದಿಯಿಂದ ಬಳಲುತ್ತಿರುವ ರೈತ ಹಾಗೂ ಜಾನುವಾರುಗಳ ಸಂಕಷ್ಟಕ್ಕೆ ನೆರವಾಗಬೇಕಾದ ರಾಜ್ಯ ಸರ್ಕಾರ ಕನ್ನಂಬಾಡಿ ನದಿ ಪಾತ್ರದ ನಾಲೆಗಳಿಗೆ ನೀರು ಹರಿಸದೇ ತಮಿಳುನಾಡಿಗೆ ನೀರು ಹರಿಸಲು ಆಸಕ್ತಿ ತೋರುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.
ರಾಜ್ಯದ ನೀರಾವರಿ ಯೋಜನೆಗಳಲ್ಲಿ ಸೂಕ್ತ ನ್ಯಾಯ ಪಡೆಯಲು ಜೆಡಿಎಸ್ ಪಕ್ಷ ಎನ್.ಡಿ.ಎ ಜೊತೆ ಮೈತ್ರಿಗೆ ಮುಂದಾಗಿದೆ. ಕೃಷ್ಣ, ಕಾವೇರಿ ಹಾಗೂ ಮೇಕೆದಾಟು ಯೋಜನೆಗಳ ಪ್ರಗತಿಗೆ ಜೆಡಿಎಸ್ ಅಭ್ಯರ್ಥಿಯಾಗಿರುವ ಹಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕೆಂದು ಕರೆ ನೀಡಿದರು.
ಕೃಷಿ ಪ್ರಧಾನವಾಗಿರುವ ರಾಷ್ಟ್ರದಲ್ಲಿ ರೈತರ ಪರವಾದ ಯೋಜನೆಗಳ ಅನುಷ್ಟಾನಕ್ಕೆ ಬದ್ದವಾಗಿರುವ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಆ ಮೂಲಕ ಕುಮಾರಸ್ವಾಮಿ ಅವರ ನಾಯಕತ್ವವನ್ನು ಬಲಗೊಳಿಸಬೇಕೆಂದು ಮನವಿ ಮಾಡಿದರು.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಮನೆ-ಮನೆಗೆ ತೆರಳಿ ಮತಯಾಚಿಸಬೇಕು. ಆ ಮೂಲಕ ಕುಮಾರಸ್ವಾಮಿಯವರು ಹೆಚ್ಚು ಮತಗಳ ಬಹುಮತದಿಂದ ಲೋಕಸಭೆಗೆ ಆಯ್ಕೆಯಾಗಲು ಸಹಕರಿಸಬೇಕೆಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ದಶರಥ, ಕಾರ್ಯಾಧ್ಯಕ್ಷ ದೇವೇಗೌಡ, ಜಿ.ಪಂ.ಮಾಜಿ ಸದಸ್ಯ ಅರಕೆರೆ ಮರೀಗೌಡ, ಮುಖಂಡರಾದ ಗಾಮನಹಳ್ಳಿ ಚಿಕ್ಕಣ್ಣ, ರಜತ್, ಇತರರಿದ್ದರು.