ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ರಾಜಧಾನಿ ಮೈಸೂರು ನಡುವೆ ಮಂಡ್ಯ ನಗರವಿದೆ. ಮಂಡ್ಯ ನಗರ ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರವು ಸಹ ಆಗಿದೆ.
ಬೆಂಗಳೂರು ಮತ್ತು ಮೈಸೂರು ನಡುವೆ ಸಂಚಾರಿಸುವ ಐಷಾರಾಮಿ ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ ಮಂಡ್ಯ ಎಂದರೆ ಅಸಡ್ಡೆ. ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ವೋಲ್ವೋ, ಐರಾವತ ಬಸ್ ಗಳಿಗೆ ಮಂಡ್ಯ ನಗರದಲ್ಲಿ ಅಧಿಕೃತ ನಿಲುಗಡೆ ಇದೆ.
ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ವೋಲ್ವೋ ಬಸ್ ಗಳಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದರೂ ಬಸ್ಸಿನ ಡ್ರೈವರ್, ಕಂಡಕ್ಟರ್ ಮಂಡ್ಯ ನಗರದ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಸ್ಸನ್ನು ನಿಲ್ಲಿಸುವುದಿಲ್ಲ.
ಮಂಡ್ಯದಿಂದ ಬೆಂಗಳೂರಿಗೆ ಕೆಂಪು ಬಸ್ಸುಗಳಲ್ಲಿ ಸರಿಸುಮಾರು 100 ರೂ. ಟಿಕೆಟ್ ದರವಿದ್ದು, ವೋಲ್ವೋ ಬಸ್ಸಿನಲ್ಲಿ ಸರಾಸರಿ 200 ರೂ. ದರವಿದೆ. ಆದರೆ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಗೆ ಮಂಡ್ಯ ಜನರಿಗೆ 100 ರೂ. ಜಾಸ್ತಿ ಕೊಟ್ಟು ವೋಲ್ವೋ ಸೇವೆ ಬಳಸಲು ಶಕ್ತಿಯಿಲ್ಲವೆಂದು ಅವರುಗಳೇ ಸ್ವಯಂ ನಿರ್ಣಯಕ್ಕೆ ಬಂದು ವೋಲ್ವೋ ಬಸ್ಸುಗಳನ್ನು ಮಂಡ್ಯ ನಿಲ್ದಾಣದ ಬಳಿ ನಿಲುಗಡೆ ಮಾಡುತ್ತಿಲ್ಲ.
ಇವರ ಸ್ವಯಂ ನಿರ್ಣಯದಿಂದ ಮಂಡ್ಯದಿಂದ ಬೆಂಗಳೂರು ಮತ್ತು ಮೈಸೂರಿಗೆ ಪ್ರಯಾಣ ಬೆಳೆಸುವ ಉದ್ಯಮಿಗಳು, ವರ್ತಕರು, ಸಾಫ್ಟ್ವೇರ್ ಇಂಜಿನಿಯರ್ಗಳು ಸೇರಿದಂತೆ ಮುಂತಾದ ನಾಗರೀಕರ ಅನುಕೂಲಕರ ಪ್ರಯಾಣಕ್ಕೆ ಅಡ್ಡಗಾಲು ಹಾಕಿರುವುದಲ್ಲದೆ ಸಾರಿಗೆ ನಿಗಮದ ಆದಾಯಕ್ಕೂ ಸಹ ಕತ್ತರಿ ಹಾಕುತ್ತಿದ್ದಾರೆ..!