ಕೆಲ ತಿಂಗಳ ಹಿಂದೆ ಭಾರೀ ಏರಿಕೆಯಾಗಿ ಸದ್ದು ಮಾಡಿದ್ದ ಈರುಳ್ಳಿ ಬೆಲೆ, ಇದೀಗ ಭಾರೀ ಕುಸಿತ ಕಂಡಿದೆ. ದಾವಣಗೆರೆಯಲ್ಲಿ ಸಣ್ಣ ಗಾತ್ರದ ಈರುಳ್ಳಿ ಒಂದು ಕೆ.ಜಿಗೆ 1 ರೂ.ಗೆ ಮಾರಾಟವಾಗುತ್ತಿದೆ. ಈರುಳ್ಳಿ ಬೆಳೆದಿದ್ದ ರೈತರು ಬೆಲೆ ಕುಸಿತದಿಂತ ಕಂಗಾಲಾಗಿದ್ದಾರೆ. ರಫ್ತು ನಿರ್ಬಂಧವನ್ನು ತೆರವುಗೊಳಿಸುವಂತೆ ಹುಬ್ಬಳ್ಳಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.
100 ಕೆ.ಜಿಯ ಚೀಲ ಈರುಳ್ಳಿಗೆ ಗರಿಷ್ಠ 1,400 ರೂ. ದೊರೆಯುತ್ತಿದೆ. ಅತ್ಯುತ್ತಮ ದಪ್ಪ ಈರುಳ್ಳಿ 1,200–1,300 ರೂ.ಗೆ ಮಾರಾಟವಾಗುತ್ತಿದ್ದರು, ಉತ್ತಮ ಮತ್ತು ಮಧ್ಯಮ ಗಾತ್ರದ ಈರುಳ್ಳಿ 600-1,100 ರೂ.ವರೆಗೆ ಮಾರಾಟವಾಗುತ್ತಿದೆ. ಇನ್ನು, ಸಣ್ಣ ಈರುಳ್ಳಿಯ ಚೀಲ ಕೇವಲ 100-200 ರೂ.ಗೆ ಮಾರಾಟವಾಗುತ್ತಿದೆ. ಹೀಗಾಗಿ, ಸಣ್ಣ ಈರುಳ್ಳಿಗೆ ಹಲವಡೆ ಕೆ.ಜಿಗೆ 1 ರೂ. ಮಾತ್ರವೇ ಇದೆ.
ಪ್ರತಿ ಕ್ವಿಂಟಾಲ್ ಈರುಳ್ಳಿಗೆ ಕನಿಷ್ಟ 3,500 ರೂ. ಬೆಲೆ ಘೋಷಿಸುವಂತೆ ಆಗ್ರಹಿಸಿ ಈರುಳ್ಳಿ ಬೆಳೆಗಾರರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 30 ಲಕ್ಷ ಈರುಳ್ಳಿ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಈರುಳ್ಳಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿರುವುದರಿಂದ ಬೆಲೆ ಕುಸಿತ ಕಂಡಿದೆ. ಕೂಡಲೇ ರಫ್ತು ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.