ಕೆ.ಆರ್.ಪೇಟೆ ತಾಲೂಕಿನಲ್ಲಿ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಮುನಿಸಿಕೊಂಡು ದೂರ ಉಳಿದ ಸ್ಥಳೀಯ ಪ್ರಭಾವಿ ನಾಯಕರಾದ ಬಿ.ಎಲ್. ದೇವರಾಜು, ಬಸ್ ಸಂತೋಷ್ ಕುಮಾರ್, ಬಸ್ ಕೃಷ್ಣೇಗೌಡ ಮತ್ತಿತರರು ಬಂಡಾಯದ ಬಾವುಟ ಹಾರಿಸಿದ್ದಾರೆ.
ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಬಿ.ಫಾರಂ ಅನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಮನ್ಮಲ್ ನಿರ್ದೇಶಕ ಎಚ್.ಟಿ. ಮಂಜು ಅವರಿಗೆ ಘೋಷಿಸಿರುವುದರಿಂದ ಮುನಿಸಿಕೊಂಡಿರುವ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಎಲ್. ದೇವರಾಜು, ಬಸ್ ಸಂತೋಷ ಕುಮಾರ್, ಬಸ್ ಕೃಷ್ಣೇಗೌಡ ಪಂಚರತ್ನ ರಥಯಾತ್ರೆಗೆ ಬರದೆ ತಮ್ಮ ಸಿಟ್ಟನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.
ಪಂಚರತ್ನ ರಥಯಾತ್ರೆಗೆ ಸ್ಥಳೀಯ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರು ಗೈರು ಹಾಜರಾಗಿರುವುದನ್ನು ಗಮನಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೆ. ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿ.ಫಾರಂ ಆಕಾಂಕ್ಷಿತರ ಜೊತೆ ಐದಾರು ಬಾರಿ ಸಭೆ ಮಾಡಿದ್ದರೂ, ಅಸಮಾಧಾನ ಗೊಂಡಿದ್ದಾರೆ.ನಾಡಿನ ಜನರ ಅಭಿವೃದ್ಧಿಗಾಗಿ ಏನೇ ಅಸಮಾಧಾನ ಇದ್ದರೂ ನೀವೆಲ್ಲಾ ಒಂದಾಗಿ ಎಚ್.ಟಿ. ಮಂಜು ಗೆಲ್ಲಿಸಲು ಶ್ರಮಿಸಬೇಕೆಂದು ಮನವಿ ಮಾಡಿದ್ದಾರೆ.
ಕೆ.ಆರ್. ಪೇಟೆ ರಾಜಕಾರಣದಲ್ಲಿ ಬಿ.ಎಲ್. ದೇವರಾಜು ಪ್ರಬಲ ಹಾಗೂ ಉತ್ತಮ ಅಭ್ಯರ್ಥಿ ಯಾಗಿದ್ದರು. ಈ ಬಾರಿ ತಮಗೆ ಟಿಕೆಟ್ ಸಿಗುವ ವಿಶ್ವಾಸ ಅವರಲ್ಲಿಯೂ ಇತ್ತು.ಆದರೆ ಜೆಡಿಎಸ್ ವರಿಷ್ಠರು ಹೆಚ್.ಟಿ. ಮಂಜು ರವರನ್ನು ಅಭ್ಯರ್ಥಿಯೆಂದು ಘೋಷಿಸುವುದರಿಂದ ಅವರು ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದಾರೆ. ಹಾಗೆಯೇ ಬಸ್ ಸಂತೋಷ್ ಕುಮಾರ್, ಬಸ್ ಕೃಷ್ಣೇಗೌಡ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದೆ ಯಾವ ರೀತಿ ತಿರುವು ಪಡೆಯುವುದೋ ಎಂಬ ಕುತೂಹಲ ಕೆ.ಆರ್. ಪೇಟೆ ಜನರಲ್ಲಿ ಮೂಡಿದೆ.