ನೂರಾರು ಹೆಣ್ಣು ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡಿರುವ ಪ್ರಜ್ಜಲ್ ರೇವಣ್ಣ ಪ್ರಕರಣವನ್ನು ಮುಚ್ಚಿ ಹಾಕುವ ಉದ್ಧೇಶದಿಂದ ಜೆಡಿಎಸ್ ನಾಯಕರು ಸಿಬಿಐಗೆ ವಹಿಸಿ ಎನ್ನುತ್ತಿದ್ದಾರೆ, ಪ್ರಸ್ತುತ ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆ ಮೂಲಕ ಪ್ರಕರಣ ಮುಚ್ಚಿಹಾಕಲು ಷಡ್ಯಂತ್ರ ನಡೆಯುತ್ತಿದೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಾಸನ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಡಿಕೆಶಿ ಕೈವಾಡವಿದೆ ಎಂದು ಆರೋಪಿಸಿ ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿರುವುದು ನಾಚಿಕೆಗೇಡಿನ ವಿಚಾರ. ತಪ್ಪಿತಸ್ಥ ಪ್ರಜ್ಜಲ್ ರೇವಣ್ಣಗೆ ಶಿಕ್ಷೆ ನೀಡುವಂತೆ ಒತ್ತಾಯಿಸುವುದನ್ನು ಬಿಟ್ಟು, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಪ್ರತಿಭಟನೆ ನಡೆಸಿರುವುದು ಸಮಾಜವೇ ತಲೆತಗ್ಗಿಸುವ ವಿಚಾರವಾಗಿದೆ ಎಂದು ಕಿಡಿಕಾರಿದರು.
ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡುವ ನೈತಿಕತೆ ಜೆಡಿಎಸ್ ನಾಯಕರಿಗಿಲ್ಲ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಹಾಗೂ ಜೆಡಿಎಸ್ ಪಕ್ಷಕ್ಕೆ ಬಂದಿರುವ ಕಳಂಕ ಮರೆಮಾಚಲು ಪಿತೂರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬರಗಾಲ, ಬರ ಪರಿಹಾರದ ಬಗ್ಗೆ ಯಾವತ್ತು ಪ್ರತಿಭಟನೆ ನಡೆಸದ ಜೆಡಿಎಸ್, ಡಿಕೆಶಿ ವಿರುದ್ದ ಪ್ರಕರಣವನ್ನು ಮರೆಮಾಚುವ ಸಲುವಾಗಿ ಈ ರೀತಿಯ ಪ್ರತಿಭಟನೆ ಮಾಡಿದ್ದಾರೆ. ಮುಂದೆ ಜೆಡಿಎಸ್ ಇದೇ ರೀತಿ ವರ್ತಿಸಿದರೆ ಅವರ ವಿರುದ್ಧ ನಾವು ಕೂಡ ದೊಡ್ಡ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಒಕ್ಕಲಿಗ ನಾಯಕನ ಏಳಿಗೆ ಸಹಿಸಲು ಜೆಡಿಎಸ್ ಗೆ ಆಗ್ತಿಲ್ಲ. ಎಸ್ಐಟಿ ತನಿಖಾ ತಂಡ ರಚಿಸಿ ಪೆನ್ ಡ್ರೈವ್ ಪ್ರಕರಣದ ತನಿಖೆ ನಡೆಸಲು ಸರ್ಕಾರ ಮುಂದಾಗಿದ್ದು, ಜೆಡಿಎಸ್ ಪಕ್ಷದ ಸ್ಥಿತಿ ಏನಾಗಿದೆ ಅರ್ಥಮಾಡಿಕೊಂಡು ಇದನ್ನೆಲ್ಲ ಬಿಡಬೇಕು ಎಂದರು.
ನಾಳೆ ನಮ್ಮ ಮಂತ್ರಿಗಳ ಜೊತೆ ಚರ್ಚಿಸಿ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು,
ನಮ್ಮ ಪಕ್ಷ ಹಾಗೂ ಡಿಸಿಎಂ ವಿರುದ್ದ ಗೂಬೆ ಕೂರಿಸುವ ಕೆಲಸ ಬಿಡಬೇಕು ಎಂದರು.
ಎಸ್ಐಟಿ ಪ್ರಾಮಾಣಿಕವಾಗಿ ತನಿಖೆ ಮಾಡ್ತಿದೆ, ತಪ್ಪಿತಸ್ಥರ ರಕ್ಷಣೆ ಮಾಡುವ ಕೆಲಸ ಮಾಡುತ್ತಿಲ್ಲ.
ಸಿಬಿಐ ಕೇಂದ್ರದ ಬಿಜೆಪಿ ಕೈಯಲ್ಲಿದ್ದು, ರಾಜ್ಯದ ತನಿಖಾ ತಂಡದಿಂದಲೇ ಶಿಕ್ಷೆಯಾಗುತ್ತೆ ಎಂದು ನುಡಿದರು.
ಪ್ರಜ್ವಲ್ ರೇವಣ್ಣ ಅವರನ್ನ ಕರೆ ತಂದು ಜೆಡಿಎಸ್ ನಾಯಕರು ಒಪ್ಪಿಸುವ ಬದಲು, ಡಿಕೆಶಿ ನಾಯಕತ್ವ ವನ್ನ ಸಹಿಸದೇ ಡಿಕೆಶಿ ವಿರುದ್ದ ಜೆಡಿಎಸ್ ತೇಜೊವದೆ ಮಾಡುತ್ತಿದೆ ಎಂದು ಹರಿಹಾಯ್ದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಂಖಡರಾದ ಚಿನಕುರುಳಿ ರಮೇಶ್, ವಿಜಯಲಕ್ಷ್ಮಿ ರಘುನಾಥ್, ಜಾರ್ಜ್ ಮೋಹನ್ ಕುಮಾರ್, ವೀಣಾ ಶಂಕರ್ ಸೇರಿದಂತೆ ಇತರರಿದ್ದರು.