ರಾಯಚೂರು ಜಿಲ್ಲೆಯ ಮಸ್ಕಿ ನಾಲಾ ಯೋಜನೆಯಲ್ಲಿ ಕಾಲುವೆ ಆಧುನಿಕರಣ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ಜಾಗೃತ ರೈತ ಸಂಘದ ಪದಾಧಿಕಾರಿಗಳು ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನಾ ಧರಣಿ ನಡೆಸಿದ ಪ್ರತಿಭನಾಕಾರರು ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಮಸ್ಕಿ ತಾಲ್ಲೂಕಿನ ಅನೇಕ ಹಳ್ಳಿಗಳ ಒಟ್ಟು 7,416 ಎಕರೆ ಕೃಷಿ ಭೂಮಿಗೆ ‘ಮಸ್ಕಿ ನಾಲಾ ಯೋಜನೆ’ಯಿಂದ ನೀರು ದೊರೆಯುತ್ತಿದೆ. ಕಾಲುವೆಗಳು ಸಂಪೂರ್ಣ ಶಿಥಿಲಗೊಂಡಿದ್ದರಿಂದ ಅವುಗಳ ಅಧುನೀಕಣ ಕಾಮಗಾರಿ 42.75 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಆದರೆ, ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದೆ” ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
“ಸಹಾಯಕ ಎಂಜಿನಿಯರ್, ಮುಖ್ಯ ಎಂಜಿನಿಯರ್ಗಳು ಗುತ್ತಿಗೆದಾರ ಎ.ಭೂಪಾಲ ರೆಡ್ಡಿ ಅವರೊಂದಿಗೆ ಕೈಜೋಡಿಸಿದ್ದಾರೆ. ಕಳಪೆ ಮಟ್ಟದಿಂದ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಕೂಡಲೇ ತನಿಖೆ ನಡೆಸಿ, ಗುತ್ತಿಗೆದಾರರ ಹಾಗೂ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು” ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಅಬ್ರಹ ಪನ್ನೂರು, ಜಿಲ್ಲಾಧ್ಯಕ್ಷ ಲಿಂಗಣ್ಣ, ಪ್ರದೀಪ ಕಪಗಲ್, ಸುಮಿತ್ರಪ್ಪ, ಜಿ.ನರಸಿಂಹ ಕುರ್ಡಿ, ಮಲ್ಲಿಕ್ ಮಸ್ಕಿ, ರಾಜೇಂದ್ರ ಕಲ್ಲೂರು ಇದ್ದರು.