ಗರ್ಭಿಣಿ ಮಹಿಳೆ ಬಿಲ್ಕಿಸ್ ಭಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಗುಜರಾತ್ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿರುವುದು ನಾಚಿಕೆಗೇಡಿನ ವಿಚಾರ ಎಂದು ಶಿಕ್ಷಕಿ ಕಿರಣ ಆಕ್ರೋಶ ವ್ಯಕ್ತಪಡಿಸಿದರು.
ಮಳವಳ್ಳಿ ಪಟ್ಟಣದಲ್ಲಿ ವಿವಿಧ ಮಹಿಳಾ ಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಅತ್ಯಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಬ್ಬ ಹೆಣ್ಣು ಮಗಳ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಾಗಿ ಜೈಲಿನಲ್ಲಿದ್ದ ಮೇಲ್ವರ್ಗದ ಆರೋಪಿಗಳನ್ನು ಸನ್ನಡತೆಯ ಆಧಾರದ ಮೇಲೆ ಸರ್ಕಾರ ಬಿಡುಗಡೆಗೊಳಿಸಿದೆ, ಅಲ್ಲದೇ ಆ ಸಂದರ್ಭದಲ್ಲಿ ಈ ನೀಚರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿರುವುದು, ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕವನ್ನು ಹುಟ್ಟು ಹಾಕಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನವಾದಿ ಸಂಘಟನೆಯ ಮಂಜುಳ ಮಾತನಾಡಿ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗದ ಹೊರತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೊನೆಗಾಣಿಸಲು ಸಾಧ್ಯವಿಲ್ಲ, ನಮ್ಮನ್ನಾಳುತ್ತಿರುವ ರಾಜಕಾರಣಿಗಳು ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ಬಗ್ಗೆ ಯಾರು ಸದನದಲ್ಲಿ ಮಾತನಾಡುತ್ತಿಲ್ಲ, ಇಂತಹ ರಾಜಕಾರಣಿಗಳು, ಇಂತಹ ಸರ್ಕಾರ ನಮಗೆ ಬೇಕೆ ಎಂದು ಪ್ರಶ್ನಿಸಿದರು.
ಮಹಿಳಾ ಮುಖಂಡರಾದ ಭಾಗ್ಯಮ್ಮ ಮಾತನಾಡಿ, ಚಿಕ್ಕ ಚಿಕ್ಕ ಮಕ್ಕಳ ಮೇಲೂ ವಯೋವೃದ್ಧರು ಅತ್ಯಾಚಾರ ನಡೆಸುತ್ತಿರುವುದು ಆತಂಕಕಾರಿಯಾಗಿದೆ. ಸಣ್ಣ ಮಕ್ಕಳನ್ನೂ ಯಾವುದೇ ಗಂಡಸರ ಬಳಿ ಬಿಟ್ಟು ಹೋಗುವುದಕ್ಕೆ ಭಯವಾಗುವ ವಾತಾವರಣ ನಿರ್ಮಾಣವಾಗಿದೆ. ಇದನ್ನು ಕೊನೆಗಾಣಿಸಲು ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಯಾವುದು ಅಗತ್ಯ ಎಂದರು