ಕರ್ನಾಟಕದಲ್ಲಿ ಗುಜರಾತ್ ಮಾದರಿಯನ್ನು ಪ್ರಯೋಗ ಮಾಡಿದ್ದು, ಮೀಸಲಾತಿ ಪರಿಷ್ಕರಣೆಗೆ ಕೈ ಹಾಕಿದ್ದು ಬಿಜೆಪಿ ಪಕ್ಷದ ಸೋಲಿಗೆ ಕಾರಣ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ವ್ಯಾಖ್ಯಾನಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳು ನಮ್ಮನ್ನು ಹಾಳು ಮಾಡಿದವು. ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರನ್ನು ನಿರ್ಲಕ್ಷಿಸಿದ್ದು, ಅನ್ನಭಾಗ್ಯ ಅಕ್ಕಿಯನ್ನು 5 ಕೆಜಿಗೆ ಸೀಮಿತಗೊಳಿಸಿದ್ದು ಜನಸಾಮಾನ್ಯರು ಬಿಜೆಪಿ ವಿರುದ್ಧ ತಿರುಗಿ ಬೀಳುವಂತೆ ಮಾಡಿತು. ಬಿಜೆಪಿ ಬಡವರ ಹೊಟ್ಟೆ ಮೇಲೆ ಹೊಡೆಯಿತು ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು, ಇದನ್ನು ಪಕ್ಷವು ಗಂಭೀರವಾಗಿ ಪರಿಗಣಿಸಲಿಲ್ಲ, ಆದ್ದರಿಂದ ನಾವು ಸೋಲಬೇಕಾಯಿತು ಎಂದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಹಿಂದೆ ಸರಿಸಿದ್ದೇ ದೊಡ್ಡ ತಪ್ಪು. ನಾನು ಮಾಡಿದ ಕೆಲಸಕ್ಕೆ ಈ ಸೋಲು ತೀವ್ರ ಬೇಸರವನ್ನು ತಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿದರು.
ಬಿಜೆಪಿಯಲ್ಲಿ ಜಾತಿ ಸಮೀಕರಣ ಆಗಲಿಲ್ಲ. ಕಾಂಗ್ರೆಸ್ ದಲಿತರಿಗೆ ಮಲ್ಲಿಕಾರ್ಜುನ ಖರ್ಗೆ, ಕುರುಬ ಸಮಾಜಕ್ಕೆ ಸಿದ್ದರಾಮಯ್ಯ, ವಾಲ್ಮೀಕಿ ಸಮಾಜಕ್ಕೆ ಸತೀಶ್ ಜಾರಕಿಹೊಳಿ ನಾಯಕರಿದ್ದಾರೆ. ಆದರೆ ಇಂತಹ ಯೋಚನೆ ಬಿಜೆಪಿಯಲ್ಲಿ ಇರಲಿಲ್ಲ, ಆದ್ದರಿಂದ ಸೋತಿದ್ದೇವೆ ಎಂದು ಹೇಳಿದರು.