ಪ್ರಪಂಚಕ್ಕೆ ಅನ್ನ ನೀಡುವ ನೇಗಿಲಯೋಗಿ ಅನ್ನದಾನದ ಮಹತ್ವವನ್ನು ಸಾರುವ ಕನ್ನಡ ಚಿತ್ರ ಶ್ರೀಮಂತ.ಪ್ರಪಂಚ ಎಷ್ಟೇ ಮುಂದುವರೆದರೂ ನಮ್ಮ ಪ್ರಾಣ ಉಳಿಸುವುದು ರೈತ ಬೆಳೆಯುವ ಬೆಳೆ. ಇಂತಹ ಕಥಾಹಂದರವನ್ನು ಒಳಗೊಂಡಿರುವ ರೈತನ ಕುರಿತಾದ ಬದುಕು, ಬವಣೆಗಳೊಂದಿಗೆ, ಹಳ್ಳಿಯ ಸೊಗಡು, ಗ್ರಾಮೀಣ ಕಲೆಗಳು, ಸ್ನೇಹ, ಪ್ರೀತಿ, ಬಾಂಧವ್ಯ ಹೀಗೆ ಎಲ್ಲಾ ಅಂಶಗಳನ್ನು ಬೆಸೆದುಕೊಂಡಿರುವ ಶ್ರೀಮಂತ ಚಿತ್ರ ಇದೇ ಏ.14ರಂದು ತೆರೆಮೇಲೆ ಬರಲು ಸಿದ್ಧವಾಗುತ್ತಿದೆ.
ಗೋಲ್ಡನ್ ರೈನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಜಿ.ನಾರಾಯಣಪ್ಪ ವಿ.ಸಂಜಯ್ ಬಾಬು ಹಾಗೂ ಹಾಸನ್ ರಮೇಶ್ ಈ ಚಿತ್ರ ನಿರ್ಮಿಸಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಹಾಸನ ರಮೇಶ್ ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಪ್ರಥಮ ಬಾರಿಗೆ ಸೋನುಸೂದ್ ನಾಯಕರಾಗಿ ಅಭಿನಯಿಸುತ್ತಿದ್ದು, ಸೋನುಸೂದ್ಗೆ ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟ್ಟರ್ಧನ್ ನಟಿಸಿದ್ದಾರೆ. ಮತ್ತೊಂದು ಜೋಡಿ ನಾಯಕ ನಾಯಕಿಯಾಗಿ ಕ್ರಾಂತಿ ಹಾಗೂ ವೈಷ್ಣವಿ ಚಂದ್ರನ್ ನಟಿಸಿದ್ದಾರೆ.
ಉಳಿದಂತೆ ತಾರಾಗಣದಲ್ಲಿ ರಮೇಶ್ ಭಟ್, ರವಿಶಂಕರ್ ಗೌಡ, ಸಾಧು ಕೋಕಿಲ, ಚರಣ್ ರಾಜ್, ಕಲ್ಯಾಣಿ, ಗಿರಿ, ರಾಜು ತಾಳಿಕೋಟೆ, ಕುರಿಬಾಂಡ್ ರಂಗ, ಬ್ಯಾಂಕ್ ಮಂಜಣ್ಣ, ಬಸುರಾಜ್ ಹಾಸನ್ ಹಾಗೂ ಮುಂತಾದವರಿದ್ದಾರೆ.
ಚಿತ್ರದ ಹಾಡುಗಳಿಗೆ ಹಂಸಲೇಖ ಸಂಗೀತ ಹಾಗೂ ಸಾಹಿತ್ಯ ನೀಡಿದ್ದು, ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ, ವಿಜಯ್ ಪ್ರಕಾಶ್, ನವೀನ್ ಸಜ್ಜು, ಅಜಯ್ ವಾರಿಯರ್, ರಘು, ಅಂಕಿತಾ ಕುಂಡು, ಅಮ್ರಪಾಲಿ ಮುಂತಾದವರು ಹಾಡಿದ್ದಾರೆ ಎಂದು ಸಹಾಯಕ ನಿರ್ದೇಶಕ ಶಿವರಾಜ್ ದಳವಾಯಿ ಮಂಡ್ಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಗೋಷ್ಠಿಯಲ್ಲಿ ಜೆಡಿಎಸ್ ಯುವ ಉಪಾಧ್ಯಕ್ಷ ರಾಕೇಶ್, ಕೃಷಿಕ ಚಂದ್ರಶೇಖರ, ಸಹಾಯಕ ನಿರ್ದೇಶಕಿ ವೇದ ಎಂ ಗೌಡ, ಕಲಾವಿದರಾದ ವಾಲ್ ನಟ್ ಮಹೇಶ್, ಸತೀಶ್ ಪಟೇಲ್, ಗುರುಗೌಡ ಹಾಗೂ ರುಕ್ಮಾಂಗದ ಉಪಸ್ಥಿತರಿದ್ದರು.