ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ನಾಗಮಂಗಲ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಅಬ್ಬರದ ಪ್ರಚಾರ ನಡೆಸಿ ಮತಯಾಚಿಸಿದರು.
ಹಳ್ಳಿಗಳಲ್ಲಿ ರೋಡ್ ಶೋ ನಡೆಸಿದ ಸ್ಟಾರ್ ಚಂದ್ರು ಅವರು, ಜಿಲ್ಲೆಯ ಮತ್ತು ರಾಜ್ಯದ ಹಿತ ಕಾಯಲು ಮತದಾರರು ನನ್ನನ್ನು ಬೆಂಬಲಿಸಬೇಕು. ನನ್ನ ಗೆಲುವು ರೈತರ ಗೆಲುವು, ಈ ಜಿಲ್ಲೆಯ ಜನತೆಯ ಗೆಲುವು ಎಂದರು.
ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಮತದಾರರು ಕಾಂಗ್ರೆಸ್ ಅನ್ನು ಬೆಂಬಲಿಸಬೇಕು. ಸದೃಢ ಭಾರತ ನಿರ್ಮಾಣದ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ರಾಜ್ಯದ ಜನತೆಗೆ ಕಾಂಗ್ರೆಸ್ ಕೊಟ್ಟಿರುವ ಕೊಡುಗೆಗಳನ್ನು ನೆನೆದು ಜನಸೇವೆ ಮಾಡಲು ನನಗೊಂದು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ರೈತರ ಸಾಲಮನ್ನಾ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಆಗಲಿದೆ. ದುಡಿಯುವ ಕೈಗೆ ಉದ್ಯೋಗ ಸಿಗಲಿದೆ. ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ. ಮಂಡ್ಯದ ಜನತೆ ಅಭಿವೃದ್ಧಿಗೆ ಶ್ರಮಿಸುವವರನ್ನು ಬೆಂಬಲಿಸಲಿದ್ದಾರೆ ಎಂಬುದಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಳು ಶಾಸಕರನ್ನು ಹಾರಿಸಿ ಕಳುಹಿಸಿದ್ದೀರಿ. ಏ.26ರಂದು ನಡೆಯಲಿರುವ ಚುನಾವಣೆಯಲ್ಲಿ ಮತ ನೀಡುವ ಮೂಲಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಸ್ಟಾರ್ ಚಂದ್ರು ಪರ ಮತಯಾಚಿಸಿ, ತಾಲೂಕಿನ ಮನೆ ಮಗನನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಜನ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಈಗ ದೇಶದ ಮನೆಮಾತಾಗಿವೆ. ಕಾಂಗ್ರೆಸ್ ಘೋಷಣೆ ಮಾಡಿರುವ 25 ಭರವಸೆಗಳ ಮೇಲೆ ಜನರು ವಿಶ್ವಾಸವಿಟ್ಟು ಮತ ಚಲಾಯಿಸಲಿದ್ದಾರೆ. ನಾಗಮಂಗಲ ತಾಲೂಕಿನ ಮತದಾರರು ಅತಿಹೆಚ್ಚು ಮತಗಳ ಅಂತರದಿಂದ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಬೇಕು ಎಂದು ಕರೆಕೊಟ್ಟರು.
18 ಗ್ರಾಮ ಪಂಚಾಯತಿಗಳಲ್ಲಿ ಪ್ರಚಾರ
ಕದಬಹಳ್ಳಿ, ಲಾಳನಕೆರೆ, ಬಿಂಡಿಗನವಿಲೆ, ಹೊನ್ನಾವರ, ದೊಡ್ಡಾಬಾಲ, ಮಾಯಿಗೋನಹಳ್ಳಿ, ಪಾಲಗ್ರಹಾರ, ಹರದನಹಳ್ಳಿ, ದೇವರಮಲ್ಲನಾಯಕನಹಳ್ಳಿ, ದೇವಲಾಪುರ, ಭೀಮನಹಳ್ಳಿ, ಕರಡಹಳ್ಳಿ, ಬ್ರಹ್ಮದೇವರಹಳ್ಳಿ, ಮಣ್ಣಹಳ್ಳಿ, ಹೊಣಕೆರೆ, ಚಿಣ್ಣ, ಕಾಂತಾಪುರ, ಬೋಗಾದಿ ಗ್ರಾಮ ಪಂಚಾಯತಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.