ತಮಿಳು ಕಾಲೋನಿಯ ನಡೆಸಿ, ಶ್ರಮಿಕ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ಮದ್ದೂರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಮದ್ದೂರು ಪಟ್ಟಣದ ಉಗ್ರನರಸಿಂಹ ಸ್ವಾಮಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಶ್ರಮಿಕರು, ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷವಾಕ್ಯದೊಂದಿಗೆ ತಾಲೂಕು ಕಚೇರಿವರೆಗೆ ಜಾತಾ ನಡೆಸಿ, ನಂತರ ಧರಣಿ ಕುಳಿತರು.
ಮದ್ದೂರಿನ ಕೆಇಬಿ ಮುಂಭಾಗದ ತಮಿಳು ಕಾಲೋನಿ ಪ್ರದೇಶವನ್ನು ಕಳೆದ 57 ವರ್ಷಗಳ ಹಿಂದೆ ಸ್ಲಂ ಎಂದು ಘೋಷಿತವಾಗಿದೆ. ಆದರೆ ವಕ್ಫ್ ಮಂಡಳಿಯು ಶ್ರಮಿಕ ನಿವಾಸಿಗಳ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸುಯತ್ತಿದೆ. ಹಾಗಾಗಿ ಕಾಲೋನಿಯ ಸರ್ವೇ ಕಾರ್ಯ ನಡೆಸಲು ಅಡ್ಡಗಾಲು ಹಾಕುತ್ತಿದೆ. ಕೂಡಲೇ ಶಾಸಕ ಉದಯ್ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯೆ ಪ್ರವೇಶಿಸಿ, ಶ್ರಮಿಕ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮವಹಿಸಬೇಕು. ಶ್ರಮಿಕ ನಿವಾಸಿಗಳು ವಾಸಿಸುತ್ತಿರುವ ಪ್ರದೇಶವನ್ನು ಕೊಳಚೆ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಲು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಮದ್ದೂರು ತಹಶೀಲ್ದಾರ್ ಪ್ರಭಾವಿ ವ್ಯಕ್ತಿಗಳಿಗೆ ಮಣಿದು ಹಕ್ಕುಪತ್ರ ವಿತರಿಸಲು ಮೀನಾ ಮೇಷ ಎಣಿಸುತ್ತಿದ್ದಾರೆ. ಹಾಗಾಗಿ ಶಾಸಕರು ಮಧ್ಯ ಪ್ರವೇಶ ಮಾಡಿ, ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಮುಖಂಡರಾದ ನಗರಕೆರೆ ಜಗದೀಶ್, ಕಮಲ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.