ಮಂಡ್ಯ ತಾಲ್ಲೂಕು ಚೀರನಹಳ್ಳಿ ಗ್ರಾಮದಲ್ಲಿ ಸುಮಾರು 800 ವರ್ಷಗಳ ಇತಿಹಾಸವುಳ್ಳ ಶ್ರೀ ಬೀರೇಶ್ವರ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶವಿಲ್ಲ, ದೇವರ ಮೆರವಣಿಗೆ ಪೂಜಾ ಕುಣಿತದಲ್ಲಿ ದಲಿತರು ಭಾಗವಹಿಸುವಂತಿಲ್ಲ ಎಂಬಂತ ಅಸ್ಪೃಶ್ಯತೆ ಆಚರಣೆ ಕುರಿತು ನುಡಿಕರ್ನಾಟಕ.ಕಾಂ ನಲ್ಲಿ ಇತ್ತಿಚೇಗೆ ವರದಿ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತ ಮಂಡ್ಯ ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದರ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾರ್ವನಿಕರಿಂದ ಮಾಹಿತಿ ಸಂಗ್ರಹಿಸಿ, ದೇವಸ್ಥಾನಕ್ಕೆ ಎಲ್ಲಾ ಜಾತಿ ಜನಾಂಗದವರಿಗೆ ಮುಕ್ತ ಪ್ರವೇಶ ನೀಡಬೇಕೆಂದು ಸೂಚಿಸಿದರು, ಆನಂತರ ಚೀರನಹಳ್ಳಿ ಗ್ರಾಮಸ್ಥರು ಸರಣಿ ಸಭೆಗಳನ್ನು ನಡೆಸಿ, ಅಂತಿಮವಾಗಿ ಎಲ್ಲ ಜಾತಿಯವರಿಗೆ ದೇವಸ್ಥಾನಕ್ಕೆ ಮುಕ್ತ ಪ್ರವೇಶ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.
ದಲಿತರಿಗೆ ನ್ಯಾಯ ದೊರೆತಿದೆ
ದೇವಸ್ಥಾನ ಪ್ರವೇಶಕ್ಕೆ ದಲಿತರಿಗೆ ಮುಕ್ತ ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆ, ಇದರಿಂದ ಗ್ರಾಮದಲ್ಲಿ ಸೌಹಾರ್ದತೆ ನಿರ್ಮಾಣವಾಗುತ್ತದೆ. ಇಂತಹ ಉತ್ತಮ ನಿರ್ಧಾರ ಕೈಗೊಂಡ ಗ್ರಾಮದ ಮುಖಂಡರನ್ನು ಅಭಿನಂದಿಸುತ್ತೇನೆಂದು ವಕೀಲ ಲಕ್ಷ್ಮಣ್ ಚೀರನಹಳ್ಳಿ ತಿಳಿಸಿದ್ದಾರೆ.