ಜಮೀನಿನ ವಿಚಾರವಾಗಿ ಹಳೆಯ ದ್ವೇಷದಿಂದ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೆ ಮುಖಕ್ಕೆ ಚಪ್ಪಲಿಯಿಂದ ಹೊಡೆದು ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಿದ್ದ ಆರೋಪಿಗಳಿಗೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಮತಾ ಶಿವಪೂಜಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತಾಲ್ಲೂಕಿನ ಕೊಂಡದಮ್ಮನಪುರ ಗ್ರಾಮದ ನಿವಾಸಿಗಳಾದ ದೊಡ್ಡಯ್ಯ, ಪುಟ್ಟರಾಜು, ರವಿ, ಶಾಂತ ಮತ್ತು ಮಂಗಳಮ್ಮ ಅವರುಗಳು ದೋಷಿಗಳೆಂದು ತೀರ್ಪು ನೀಡಿದ ನ್ಯಾಯಾಧೀಶರು ಈ ಆರೋಪಿಗಳಿಗೆ 60000 ರೂ.ದಂಡ ವಿಧಿಸಿ, ದಂಡ ಕಟ್ಟಲು ತಪ್ಪಿದಲ್ಲಿ ಕಾರಾಗೃಹ ವಾಸ ಅನುಭವಿಸುವಂತೆ ಆದೇಶಿಸಿದ್ದಾರೆ.
2015ರ ಏ.20ರಂದು ಆರೋಪಿತರು ನಾಗರಾಜು ಎಂಬುವರ ಮೇಲೆ ಹಲ್ಲೆ ನಡೆಸಿದ ದೂರು ದಾಖಲಾಗಿತ್ತು.
ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯ ಅಂದಿನ ಪಿಎಐ ಲೋಹಿತ್ ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕರಾದ ಎಚ್.ಎಸ್.ಪೂರ್ಣಿಮಾ ವಾದ ಮಂಡಿಸಿದ್ದರು.
ನೊಂದ ವ್ಯಕ್ತಿಯಾದ ನಾಗರಾಜು ಅವರಿಗೆ 50,000 ರೂ.ಗಳ ಪರಿಹಾರವನ್ನೂ ಸಹ ಘೋಷಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.