ಮದ್ಯ ವ್ಯಸನಿಯೊಬ್ಬ ತನ್ನ ಪತ್ನಿಯನ್ನು ಕುಡುಗೋಲಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಮನೋಹರ್ ಅವರ ಪತ್ನಿ ಶೋಭಾ (40) ಹತ್ಯೆಗೀಡಾದ ಮಹಿಳೆ.
ಎಂದಿನಂತೆ ಕಂಠಪೂರ್ತಿ ಕುಡಿದು ಮನೆಗೆ ಬಂದು ಹೆಂಡತಿ ಜತೆಗೆ ಜಗಳ ತೆಗೆದ ಮನೋಹರ್, ಮನೆಯಲ್ಲಿದ್ದ ಕುಡುಗೋಲಿನಿಂದ ಶೋಭಾಳ ಕಾಲಿಗೆ ಬಲವಾಗಿ ಹೊಡೆದ. ತೀವ್ರ ರಕ್ತಸ್ರಾವವಾಗಿ ಆಕೆ ಮೃತಪಟ್ಟಿದ್ದಾರೆ.
ಬಳಿಕ ಆರೋಪಿ ಮನೋಹರ್ ನನ್ನು ಬಂಧಿಸಿರುವ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪಾಂಡವಪುರ ಉಪವಿಭಾಗೀಯ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಶವ ಒಪ್ಪಿಸಲಾಗಿದೆ.
ಅಕ್ರಮ ಸಂಬಂಧವೇ ಶೋಭಾಳ ಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಶೋಭಾ-ಮನೋಹರ್ ದಂಪತಿಗೆ ಗಂಡು ಹಾಗೂ ಹೆಣ್ಣು ಮಕ್ಕಳಿದ್ದು, ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಮಗಳನ್ನು ಸಣಬ ಗ್ರಾಮದ ಯುವಕನಿಗೆ ಮದುವೆ ಮಾಡಲಾಗಿದೆ.