Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕುರಿಯನ್ನು ರಕ್ಷಿಸಲು ಹೋದವನಿಗೆ ಕಾರು ಡಿಕ್ಕಿ: ಯುವಕ ಸ್ಥಳದಲ್ಲೇ ಸಾವು

ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಡ್ಯ ತಾಲ್ಲೂಕಿನ ಹೊಸಬೂದನೂರು ಗ್ರಾಮದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ 5.45ರ ಸಮಯದಲ್ಲಿ ನಡೆದಿದೆ.

ಹೊಸಬೂದನೂರು ಗ್ರಾಮದ ಚಿಕ್ಕಲಿಂಗಯ್ಯ ಅವರ ಪುತ್ರ, ಟ್ರಾಕ್ಟರ್ ಚಾಲಕ ವಿಶ್ವ (39) ಮೃತ ಯುವಕ.

ಕುರಿಯನ್ನು ಸಾಕಿದ್ದ ವಿಶ್ವ ತಮ್ಮ ಜಮೀನಿನಿಂದ ಕುರಿಯನ್ನು ಹಿಡಿದುಕೊಂಡು ಸರ್ವಿಸ್ ರಸ್ತೆ ಮೂಲಕ ಮನೆಗೆ ವಾಪಸ್ಸಾಗುವಾಗ ಕುರಿಯು ಕಿತ್ತುಕೊಂಡು ಹೆದ್ದಾರಿಗೆ ನುಗ್ಗಿದೆ, ಅದನ್ನು ರಕ್ಷಿಸಲು ವಿಶ್ವ ಬೆಂಗಳೂರು-ಮೈಸೂರು ಹೆದ್ದಾರಿಗೆ ಹೋದಾಗ ಅತಿವೇಗವಾಗಿ ಬಂದ ಫಾರ್ಚುನರ್ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ವಿಶ್ವ ಮೃತಪಟ್ಟರು. ಅಪಘಾತದ ನಂತರ ಕಾರನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಧಾವಿಸಿದ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರು, ಮೃತದೇಹವನ್ನು ಮಂಡ್ಯ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನಿನ್ನೆಯ ಗುರುವಾರವಷ್ಟೇ ಬೈಕ್‌ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇದೇ ಗ್ರಾಮದ ಅಜ್ಜಿ ಮತ್ತು ಮೊಮ್ಮಗ ಮೃತಪಟ್ಟಿದ್ದರು. ಇದು ಮಾಸುವ ಮುನ್ನವೇ ಈ ದುರ್ಘಟನೆ ನಡೆದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!