Sunday, May 19, 2024

ಪ್ರಾಯೋಗಿಕ ಆವೃತ್ತಿ

ಎಲ್ಲಾ ಕ್ಷೇತ್ರಗಳು ಮಲಿನವಾದಾಗ ಶಿಕ್ಷಕರು ಶುದ್ದೀಕರಿಸುತ್ತಾರೆ…

ವಿವೇಕಾನಂದ ಎಚ್.ಕೆ.

” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ ” ಎಂಬ ಮಾತನ್ನು

” ಎಲ್ಲಾ ಕ್ಷೇತ್ರಗಳು ಮಲಿನವಾದಾಗ ಶಿಕ್ಷಕರು ಶುದ್ದೀಕರಿಸುತ್ತಾರೆ ” ಎನ್ನೋಣವೇ…….

ಅದೊಂದೇ ಭರವಸೆ ಈಗ ಉಳಿದಿರುವುದು……

ಸೆಪ್ಟೆಂಬರ್ ‌5 ಶಿಕ್ಷಕರ ದಿನಾಚರಣೆ…..

ಈಗಲೂ ಸಮಾಜದಲ್ಲಿ ಅಲ್ಪ ಸ್ವಲ್ಪ ಗೌರವ ಘನತೆ ಅಭಿಮಾನ ಮರ್ಯಾದೆ ಭರವಸೆ ಉಳಿಸಿಕೊಂಡಿರುವ ಕ್ಷೇತ್ರ ಶಿಕ್ಷಕರದು. ( ಶೈಕ್ಷಣಿಕ ಸಂಸ್ಥೆಗಳಲ್ಲ )

ಕೆಲವು ಅಪರೂಪದ ನೀತಿಗೆಟ್ಟ ಶಿಕ್ಷಕರನ್ನು ಹೊರತುಪಡಿಸಿ ಬಹುತೇಕ ಎಲ್ಲರೂ ಒಂದಷ್ಟು ಸಭ್ಯತೆ ಸಂಸ್ಕಾರ ಸಾಮಾಜಿಕ ಜವಾಬ್ದಾರಿ ಉಳ್ಳವರಾಗಿದ್ದಾರೆ. ಆ ಕಾರಣಕ್ಕಾಗಿಯೇ ಸಮಾಜ ಇನ್ನೂ ‌ತೀರಾ ಅದೋಗತಿಗೆ ಇಳಿಯದೆ ಸ್ವಲ್ಪ ಮಾನ ಮರ್ಯಾದೆ ಉಳಿಸಿಕೊಂಡಿದೆ….

ಆಧುನಿಕ ಕಾಲದ ಕಡ್ಡಾಯ ಶಿಕ್ಷಣದ ಸಂದರ್ಭದಲ್ಲಿ ಮನುಷ್ಯನ ತಿಳಿವಳಿಕೆ ಅಧೀಕೃತವಾಗಿ ಮೂಡುವುದೇ ಶಾಲೆ ಮತ್ತು ಶಿಕ್ಷಕರ ಪ್ರಭಾವದಿಂದ. ಅನಧಿಕೃತವಾಗಿ ಕುಟುಂಬ ಪರಿಸರಗಳ ಪ್ರಭಾವ ಬೀರುತ್ತದೆ ನಿಜ ಆದರೆ ಯೋಚನೆಯ ವಿವಿಧ ಆಯಾಮಗಳು ಟಿಸಿಲೊಡೆಯುವುದೇ ಶಿಕ್ಷಣದ ಕಲಿಕಾ ಕ್ರಮದಲ್ಲಿ. ಅಂದರೆ ಶಿಕ್ಷಕರೇ ನಮ್ಮ ಬದುಕಿನ ಅತ್ಯಂತ ಪ್ರಮುಖ ಮಾರ್ಗದರ್ಶಿಗಳು…..

ಇದರ ಒಟ್ಟು ಸಾರಾಂಶವನ್ನು ಹೀಗೆ ಹೇಳಬಹುದು. ಒಬ್ಬ ವ್ಯಕ್ತಿ ಶಿಕ್ಷಣ ಮತ್ತು ಶಿಕ್ಷಣದಿಂದಲೇ ಬಹುತೇಕ ರೂಪಗೊಳ್ಳುವುದಾದರೆ ಇಡೀ ಸಮಾಜ ಇದೇ ವ್ಯಕ್ತಿಗಳ ಸಮೂಹ. ಅಂದರೆ ಶಿಕ್ಷಣ ಶಿಕ್ಷಕರು ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖಗಳು….

ಆದರೆ ಭಾರತೀಯ ಸಮಾಜದ ಈ ಕ್ಷಣದ ಪ್ರಾಕೃತಿಕ, ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳನ್ನು ನೋಡಿದಾಗ ಎಲ್ಲಾ ಒಳ್ಳೆಯದರ ನಡುವೆ ನಿರಾಸೆ ಮತ್ತು ಬೇಸರವೇ ಹೆಚ್ಚು ಎದ್ದು ಕಾಣುತ್ತದೆ. ಕಾರಣ ಶಿಕ್ಷಣ ಮತ್ತು ಶಿಕ್ಷಕರ ನೈತಿಕ ಮೌಲ್ಯಗಳು ಸಹ ಗಣನೀಯವಾಗಿ ಕುಸಿಯುತ್ತಿದೆ. ಕಾರಣಗಳು, ನೆಪಗಳು, ಅನಿವಾರ್ಯಗಳು ಹಲವಿರಬಹುದು. ಆದರೆ ವಾಸ್ತವ ಮಾತ್ರ ಕಠೋರ……

ಕ್ರಿಸ್ತ ಪೂರ್ವ ಕಾಲ ಘಟ್ಟದಲ್ಲಿ ಅಥವಾ ಭಾರತದ ಸ್ವಾತಂತ್ರ್ಯ ಪೂರ್ವದ ಕಾಲಘಟ್ಟಕ್ಕೆ ಈಗಿನ ಆಧುನಿಕ ಶಿಕ್ಷಣ ಪಡೆದ ಸಮಾಜಕ್ಕೆ ಹೋಲಿಕೆ ಮಾಡಿದಾಗ ತಿಳಿವಳಿಕೆ ಮತ್ತು ನಡವಳಿಕೆಯ ಅಂತರ ಸ್ಪಷ್ಟವಾಗಿ ಗೋಚರಿಸುತ್ತದೆ.

ರಕ್ಷಣೆ, ಸೌಲಭ್ಯ, ಸ್ವಾತಂತ್ರ್ಯ, ಸಮಾನತೆ, ಅನುಕೂಲ, ತಂತ್ರಜ್ಞಾನ ಎಲ್ಲವೂ ಈಗ ಅತ್ಯುತ್ತಮ ಮಟ್ಟದಲ್ಲಿದೆ. ಆದರೆ ನಾಗರಿಕ ಸಮಾಜದ ಮೂಲ ಆಶಯಗಳು ಮಾತ್ರ ನಿಕೃಷ್ಟವಾಗಿದೆ. ಮನುಷ್ಯ ಮುಖವಾಡದ ರಾಕ್ಷಸ ರೂಪಗಳು ಅನಾಗರಿಕ ಸಮಾಜವನ್ನು ನೆನಪಿಸುತ್ತಿದೆ. ಅದರ ಹೊಣೆಗಾರಿಕೆ ಸಹ ನೇರವಾಗಿ ಶಿಕ್ಷಣ ಮತ್ತು ಶಿಕ್ಷಕರತ್ತ ಬೊಟ್ಟು ಮಾಡುತ್ತಿದೆ….

ಹಿಂದೆ ಶಿಕ್ಷಕರ ಮೇಲೆ ಇದ್ದ ಆರೋಪಗಳು ಕೇವಲ ಕೆಲವರಿಗೆ ಮಾತ್ರ ಅನ್ವಯವಾಗುತ್ತಿತ್ತು. ಆದರೆ ದುರಾದೃಷ್ಟವಶಾತ್ ಆ ಆರೋಪಗಳು ಇಂದು ಸಾರ್ವತ್ರಿಕವಾಗುತ್ತಿವೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಶಿಕ್ಷಕರಲ್ಲಿ ಸಂಬಳಕ್ಕಾಗಿ ದುಡಿಯುವ ಹೊಟ್ಟೆಪಾಡಿನ ಶಿಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಬಹುತೇಕ ಎಲ್ಲರೂ ಹೊಟ್ಟೆಪಾಡಿಗಾಗಿ ದುಡಿಯುವವರೇ ಎಂಬುದು ವಾಸ್ತವ, ಆದರೆ ವೃತ್ತಿ ಧರ್ಮವನ್ನು ಸಹ ಅತ್ಯಂತ ಪ್ರಾಮಾಣಿಕವಾಗಿ ಮತ್ತು ದಕ್ಷವಾಗಿ ಇಷ್ಟಪಟ್ಟು ಪ್ರೀತಿಯಿಂದ ಪಾಲಿಸಬೇಕು. ಶಿಕ್ಷಕರು ಮತ್ತು ವೈದ್ಯರ ಮೇಲೆ ಈ ಜವಾಬ್ದಾರಿ ಹೆಚ್ಚು. ಅಲ್ಲಿ ಬಹಳಷ್ಟು ಶಿಕ್ಷಕರು ಎಡವುತ್ತಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸಂಬಳ ಮೀರಿದ ಬಾಂಧವ್ಯ ಮತ್ತು ಒಡನಾಟ ಸಾಧಿಸುವಲ್ಲಿ ವಿಫಲವಾಗುತ್ತಿದ್ದಾರೆ. ವರ್ಗಾವಣೆ ಎಂಬುದು ಪೋಲೀಸ್ ಇಲಾಖೆಯ ರೀತಿ ದಂಧೆಯಾಗಿದೆ. ಕೆಲವರು ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದಾರೆ. ಮತ್ತೆ ಕೆಲವರು ರಾಜಕಾರಣಿ ಬಾಲಂಗೋಚಿ ಅಥವಾ ಪುಡಾರಿಗಳಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾರೆ. ಜೂಜು ಮತ್ತು ಚೀಟಿ – ಬಡ್ಡಿ ವ್ಯವಹಾರಗಳಲ್ಲಿ ಸಹ ಹೆಚ್ಚು ಹೆಚ್ಚು ಕಾಲ ಕಳೆಯುತ್ತಾರೆ. ಇನ್ನೂ ಹಲವಾರು ಎಂದಿನಂತೆ ದುರಭ್ಯಾಸಗಳ‌ ದಾಸರಾಗಿದ್ದಾರೆ. ಯಾವುದೋ ಪಕ್ಷದ ಅನಧಿಕೃತ ಚುನಾವಣಾ ಏಜೆಂಟ್ ಗಳು ಆಗಿದ್ದಾರೆ. ಶಿಕ್ಷಕಿಯರಲ್ಲಿ ಸಹ ಕೆಲವರು ಸಮಯ ಕೊಲ್ಲುವುದಷ್ಟೇ ಮುಖ್ಯ ಎನ್ನವಂತೆ ಕಾರ್ಯನಿರ್ವಹಿಸಿ ಸಮಯ ಮುಗಿದ ತಕ್ಷಣ ಮನೆಗೆ ಓಡುತ್ತಾರೆ….

ಪರೀಕ್ಷಾ ಕೇಂದ್ರಗಳಲ್ಲಿ ಸಹ ಅನೇಕ ಅವ್ಯವಹಾರಗಳಿಗೆ ಕಾರಣರಾಗಿ ಕೆಟ್ಟ ಹೆಸರು ತಂದುಕೊಂಡಿದ್ದಾರೆ. ಹೀಗೆ ಸಾಲು ಸಾಲು ತಪ್ಪುಗಳು ಆಗುತ್ತಿವೆ…..

ಇದರ ಜೊತೆಗೆ ಸರ್ಕಾರಗಳು ಸಹ ಶಿಕ್ಷಕರನ್ನು ಗುಲಾಮರಂತೆ ದುಡಿಸಿಕೊಳ್ಳುತ್ತಾ ಪಠ್ಯೇತರ ವಿಷಯಗಳಲ್ಲಿ ಅವರನ್ನು ತೊಡಗಿಸಿ ಒತ್ತಡ ನಿರ್ಮಾಣ ಮಾಡಿ ಪಾಠ ಮಾಡಲು ಸಮಯವಿಲ್ಲದಂತೆ ಮಾಡಿದೆ. ಟಾರ್ಗೆಟ್ ಫಲಿತಾಂಶ ನಿಗದಿಪಡಿಸಿ ವಿದ್ಯಾರ್ಥಿಗಳಿಗಿಂತ ಶಿಕ್ಷಕರಿಗೇ ಹೆಚ್ಚು ಜವಾಬ್ದಾರಿ ವಹಿಸಿ ಶಿಕ್ಷಣದ ಹಾದಿ ತಪ್ಪಿಸಿದೆ. ಶಿಕ್ಷಕರ ಸಂಘಗಳ ಚುನಾವಣೆ ಮತ್ತು ವಿಧಾನ ಪರಿಷತ್ತಿನ ಪ್ರತಿನಿಧಿಗಳ ಚುನಾವಣೆಯಲ್ಲಿ ಸಹ ಶಿಕ್ಷಕರೇ ಮತದಾರರಾದರು ಅಲ್ಲಿಯೂ ಮಾದರಿಯಾಗಬೇಕಾದ ಶಿಕ್ಷಕರೇ ಹಣ ಪಡೆದು ಭ್ರಷ್ಟರಾಗಿರುವುದು ಬಹಿರಂಗ ಸತ್ಯ…

ಮಾಧ್ಯಮಗಳಲ್ಲಿ ಅದರಲ್ಲೂ ಮುಖ್ಯವಾಗಿ ಟಿವಿ ಸುದ್ದಿ ಮಾಧ್ಯಮಗಳಲ್ಲಿ ಶಾಲೆಗಳಲ್ಲಿ ಶಿಕ್ಷಕರು ಬೋದಿಸುವ ವೈಜ್ಞಾನಿಕ ಮಾಹಿತಿ ಮತ್ತು ಸಾರ್ವತ್ರಿಕ ಸತ್ಯಗಳಿಗೆ ವಿರುದ್ಧವಾಗಿ ಮೌಡ್ಯಗಳನ್ನು ಬಿತ್ತುವ ಅನೇಕ ಕಾರ್ಯಕ್ರಮಗಳು ಅನರ್ಹರಿಂದಲೇ ಪ್ರತಿನಿತ್ಯ ಪ್ರಸಾರ ಮಾಡುವಾಗ ಯಾವುದೇ ಶಿಕ್ಷಕರು ಅಥವಾ ಶಿಕ್ಷಕ ಸಂಘಟನೆಗಳು ಅದನ್ನು ಪ್ರತಿಭಟಿಸಿ ಹೇಳಿಕೆ ನೀಡುವುದನ್ನು ಮಾಡದೆ ಕಣ್ಣು ಮುಚ್ಚಿ ಕುಳಿತು ಅದನ್ನು ಮೌನವಾಗಿ ಸಹಿಸುವುದು ತಮ್ಮ ವೃತ್ತಿಗೆ ಮಾಡುವ ಅವಮಾನ. ಅದರ ಪರಿಣಾಮ ಕಳ್ಳ ಸುಳ್ಳರು ಮುಖ್ಯವಾಹಿನಿಯಲ್ಲಿ ಬೇಡಿಕೆ ಪಡೆದು ಸುಳ್ಳು ಮತ್ತು ಮಾಢ್ಯಗಳನ್ನು ಪ್ರಸಾರ ಮಾಡುತ್ತಿದ್ದಾರೆ…..

ಆದ್ದರಿಂದ ಶಿಕ್ಷಕರ ಆತ್ಮಾವಲೋಕನ ಮತ್ತು ಪುನರ್ ಮೌಲ್ಯಮಾಪನದ ಅವಶ್ಯಕತೆ ಇಂದೆಂದಿಗಿಂತಲೂ ಈಗ ಹೆಚ್ಚಾಗಿದೆ‌. ಏಕೆಂದರೆ ಸಮಾಜದ ಬಹುಮುಖ್ಯ ಭಾಗವಾದ ಎಲ್ಲಾ ಕ್ಷೇತ್ರಗಳ ಮುಖ್ಯಸ್ಥರನ್ನು ತಯಾರು ಮಾಡುವುದೇ ಶಿಕ್ಷಕರು. ಆ ಪ್ರಕ್ರಿಯೆ ಮಲಿನಗೊಂಡರೆ ದೇಶದ ಭವಿಷ್ಯ ಅಪಾಯಕ್ಕೆ ಸಿಲುಕುತ್ತದೆ……

ಹುಟ್ಟಿನಿಂದ ಸಾಯುವವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿಯೊಬ್ಬರು ಗುರುಗಳೇ ಮತ್ತು ಪ್ರತಿಯೊಬ್ಬರೂ ಶಿಕ್ಷಕರೇ. ಕಲಿಕೆ ಕಲಿಸುವಿಕೆ ಮಾನವ ಜನಾಂಗದ ಅಂತ್ಯದವರೆಗೂ ಸಾಗುತ್ತಲೇ ಇರುತ್ತದೆ…

ಆದರೆ,
ಅಕ್ಷರಗಳೋ, ಕಲೆಯೋ, ತಾಂತ್ರಿಕತೆಯೋ, ಚಾಕಚಕ್ಯತೆಯೋ ಇನ್ನೇನೋ ಕಲಿಕೆಗಿಂತ ಮುಖ್ಯವಾಗಿ ಪ್ರೀತಿ ವಿಶ್ವಾಸ ವಿನಯ ಮಾನವೀಯತೆ, ಜೀವಪರ ಸಹಜೀವನ, ಪರಿಸರ ರಕ್ಷಣೆ ಮುಂತಾದ ಅಂಶಗಳ ಕಲಿಕೆಯೇ ಅತ್ಯುತ್ತಮ ಮತ್ತು ಮೊದಲ ಆಧ್ಯತೆಯಾಗಬೇಕು. ಆಗ ಮಾತ್ರ ನಾಗರಿಕ ಸಮಾಜ ಸುಸ್ಥಿತಿಯಲ್ಲಿ ಇರಲು ಸಾಧ್ಯ…..

ಹೊಟ್ಟೆ ಪಾಡಿನ ಆಧುನಿಕ ಶಿಕ್ಷಣ ಹೊಟ್ಟೆ ತುಂಬಿದಂತೆ ಬದುಕಿನ ಸಾರ್ಥಕತೆಯ ಶಿಕ್ಷಣವಾಗಲಿ ಎಂಬ ನಿರೀಕ್ಷೆಯಲ್ಲಿ…..

ಗುರುಗಳೆಂಬ ಕಲಿಸುವವರು ನಮ್ಮ ಸಮಾಜದಲ್ಲಿ ಇನ್ನು ಮುಂದಾದರು ಅತ್ಯುತ್ತಮ ‌ಸ್ಥಾನ, ಗೌರವ ಮತ್ತು ಯೋಗ್ಯತೆ ಪಡೆಯಲಿ ಎಂದು ಆಶಿಸುತ್ತಾ……

ಹೇಳಲು ಸಾಕಷ್ಟಿದೆ. ಆದರೆ ಶಿಕ್ಷಕರು ಸೂಕ್ಷ್ಮ ಜೀವಿಗಳು. ಪರಿಸ್ಥಿತಿಯನ್ನು ಬೇಗ ಗ್ರಹಿಸುತ್ತಾರೆ ಎಂಬ ಭರವಸೆಯೊಂದಿಗೆ……..

ಶಿಕ್ಷಕರ ದಿನದ ಶುಭಾಶಯಗಳು…..

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!