ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯಿತಿಯಲ್ಲಿ ಲಂಚಾವತಾರ ಮುಗಿಲುಮುಟ್ಟಿದ್ದು, ಜನಸಾಮಾನ್ಯರು ತಮ್ಮ ಕೆಲಸಗಳನ್ನು ನಿಯಮಬದ್ಧವಾಗಿ ಮಾಡಿಸಿಕೊಳ್ಳಬೇಕಾದರೆ ಈ ಕಛೇರಿಯ ಅಧಿಕಾರಿಗಳಿಗೆ ಲಂಚವನ್ನು ನೀಡಲೇಬೇಕು.ಇಲ್ಲದಿದ್ದರೆ ಕೆಲಸವೇ ಆಗಲ್ಲ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಪಾಳ್ಯ ರಘು ಆರೋಪಿಸಿದರು.
ಪ್ರತಿ ಕೆಲಸಕ್ಕೂ ಲಂಚ ಕೊಡಬೇಕು. ಇಲ್ಲವೆಂದರೆ ತಮ್ಮ ಕಡತಗಳೇ ಮಾಯವಾಗುತ್ತವೆ. ಆದರೆ
ಮಧ್ಯವರ್ತಿಗಳ ಮೂಲಕ ಲಂಚ ನೀಡಿದಾಗ ಮಾತ್ರ ತಮ್ಮ ಕೆಲಸಗಳು ಸರಾಗವಾಗಿ ಸಾಗುತ್ತವೆ. ಪಟ್ಟಣ ಪಂಚಾಯಿತಿ ಕಚೇರಿಯು ಭ್ರಷ್ಟ ಅಧಿಕಾರಿಗಳ ಅಕ್ರಮಗಳ ತಾಣವಾಗಿದ್ದು ಲಂಚಾವತಾರ ಮುಗಿಲುಮುಟ್ಟಿದೆ. ಭ್ರಷ್ಟಾಚಾರದಲ್ಲಿ ಮುಂದಿರುವ ಪಂಚಾಯತಿ ಲೋಕಾಯುಕ್ತ ತನಿಖೆಗೆ ಅರ್ಹವಾಗಿದೆ ಎಂದು ಬೇಸರ ವ್ಯಕ್ತಪಡಿಸಿ ಸಿಬ್ಬಂದಿಗಳ ವಿರುದ್ಧ ಹರಿಹಾಯ್ದರು.
ಕಳೆದ ಆರು ತಿಂಗಳ ಹಿಂದೆ ನನ್ನ ಧರ್ಮಪತ್ನಿ ಡಿ.ಎಂ ಮೈತ್ರಿ ಮತ್ತು ರಘು ಎಂಬ ನನ್ನ ಹೆಸರಿನ ಎರಡು ಖಾತೆ ಮಾಡಿಸಿಕೊಳ್ಳಲು ಪಟ್ಟಣ ಪಂಚಾಯಿತಿಗೆ ನನ್ನ ಕ್ರಯ ಪತ್ರ, ಸೂಕ್ತ ದಾಖಲಾತಿಗಳನ್ನು ನೀಡಿ ಕಚೇರಿಯ ರಿಜಿಸ್ಟರ್ ಪುಸ್ತಕದಲ್ಲಿ ದಾಖಲಿಸಿ ಖಾತೆ ಮಾಡಿ ಕೊಡುವಂತೆ ಮನವಿ ಮಾಡಿದ್ದೆ. ಆದರೆ ಭ್ರಷ್ಟ ಅಧಿಕಾರಿಗಳು ಲಂಚದ ಹಣಕ್ಕಾಗಿ ನನ್ನ ದಾಖಲಾತಿಯನ್ನೇ ಕಳೆದು ಹೋಗಿದೆ ಎಂದು ಕಳ್ಳ ನೆಪ ಹೇಳಿದರು. ಆದರೂ ಕೂಡ ಮತ್ತೊಮ್ಮೆ ನಾನು ದಾಖಲಾತಿಯನ್ನು ಸಲ್ಲಿಸಿದಾಗ ಖಾತೆ ಮಾಡಿಕೊಡಲು ಹಿಂಜರಿಯುತ್ತಿದ್ದಾರೆ. ಕಚೇರಿಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು ಮೇಲಾಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.