ಬಾಬಾ ಸಾಹೇಬರು ರಚಿಸಿದಂತಹ ಸರ್ವ ಸಮಾನತೆಯ ಭಾರತೀಯ ಸಂವಿಧಾನವನ್ನು ಮೂಲೆಗುಂಪು ಮಾಡಿ, ಚಾತುವರ್ಣದ ಶ್ರೇಣಿಕೃತ ವ್ಯವಸ್ಥೆಯ ಅಮಾನವೀಯ ಮನಸ್ಮೃತಿಯನ್ನು ಜಾರಿಗೊಳಿಸಲು ಸಿದ್ದವಾಗಿರುವ ಶಕ್ತಿಗಳು ರಾಜ್ಯ ಹಾಗೂ ದೇಶದಲ್ಲಿ ಅಧಿಕಾರಕ್ಕೆ ಬಂದಿದ್ದು, ಅವರನ್ನು ಹಿಮ್ಮೆಟ್ಟಿಸುವಂತಹ ಕೆಲಸವಾಗಬೇಕೆಂದು ಈ ದಿನ.ಕಾಂನ ಮುಖ್ಯ ಸಂಪಾದಕ ಡಿ.ಉಮಾಪತಿ ಕರೆ ನೀಡಿದರು.
ಮಂಡ್ಯನಗರದ ಕಾಳಪ್ಪ ಶ್ರಮಿಕ ಬಡಾವಣೆಯಲ್ಲಿ ಶುಕ್ರವಾರ ಸಂಜೆ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾನತೆ ಸಾರುವ ಭೌದ್ಧ ಧರ್ಮದ ನಾಶಕ್ಕಾಗಿ ಕ್ರಿಸ್ಥ ಪೂರ್ವದಲ್ಲಿ ಪ್ರತಿ ಕ್ರಾಂತಿ ನಡೆದ ಸಂದರ್ಭದಲ್ಲಿ ಮನು ರಚಿಸಿದ ಮನುಸ್ಮೃತಿಯು ಮನುಷ್ಯರನ್ನು ಅಮಾನವೀಯವಾಗಿ ಕಾಣುವ ಕಾನೂನಾಗಿದೆ. ಇದರಂತೆ ನಡೆದರೆ ದಲಿತರು, ಶೋಷಿತರು, ಪ್ರಾಣಿಗಳಿಗಿಂತ ನಿಕೃಷ್ಟವಾಗಿ ಬದುಕಬೇಕಾಗುತ್ತದೆ. ಆದ್ದರಿಂದ ಮನುಸ್ಮೃತಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಲು ಬಿಡಬಾರದು ಎಂದು ಎಚ್ಚರಿಸಿದರು.
ತಮ್ಮ ಭಾಷಣದುದ್ದಕ್ಕೂ ಮನುಸ್ಮೃತಿಯನ್ನು ಅಮಾನವೀಯ ಕಾನೂನು ಕಟ್ಟಳೆಗಳನ್ನು ಸಭಿಕರ ಮುಂದಿಟ್ಟರು. 1927 ಡಿ.25ರಂದು ಇಂತಹ ಮನುಸ್ಮೃತಿಯನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಹನ ಮಾಡಿದರು. ಆಗ ಅಂದಿನ ಪತ್ರಿಕೆಗಳು ಬಾಬು ಸಾಹೇಬರನ್ನು ಭೀಮಾಸುರ, ರಾಕ್ಷಸ, ರಾಷ್ಟ್ರೀಯತೆ ವಿರೋಧಿ ಎಂದೆಲ್ಲ ನಿಂದಿಸಿದವು, ಏಕೆಂದರೆ ಅಂದಿನ ಪತ್ರಿಕೆಗಳೆಲ್ಲ ಮೇಲ್ಜಾತಿಯವ ಕೈಯಲ್ಲಿದ್ದವು ಎಂದು ವಿವರಿಸಿದರು.
ಅಂದಿನ ದಿನದಲ್ಲಿ ಗಾಂಧಿಜೀಯವರು ನಡೆಸಿದ ದಂಡಿಯಾತ್ರೆಯನ್ನು ಸತ್ಯಾಗ್ರಹ ಎಂದು ವರದಿ ಮಾಡಿದ ಪತ್ರಿಕೆಗಳು, ದಲಿತ, ಶೋಷಿತರ ಪರ ಹೋರಾಟ ಮಾಡಿದ ಅಂಬೇಡ್ಕರ್ ಅವರ ಹೋರಾಟವನ್ನು ಸತ್ಯಾಗ್ರಹವೆಂದು ಒಪ್ಪಿಗೊಳ್ಳಲು ತಯಾರಿರಲಿಲ್ಲ ಎಂಬುದನ್ನು ನಾವು ಗಮನಿಸಬೇಕಾಗಿದೆ ಎಂದು ನುಡಿದರು.
ಈ ದಿನ.ಕಾಂ ಮುಖ್ಯಸ್ಥ ಡಾ.ವಾಸು ಮಂಡ್ಯ ಶ್ರಮಿಕ ಹೋರಾಟ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಶ್ರಮಿಕ ಶಕ್ತಿಯ ಸುಬ್ರಮಣ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ, ಕರ್ನಾಟಕ ಜನಶಕ್ತಿ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ, ನುಡಿ ಕರ್ನಾಟಕ.ಕಾಂ ಮುಖ್ಯಸ್ಥ ಎನ್.ನಾಗೇಶ್, ನೆಲದನಿ ಬಳಗದ ಮಂಗಲ ಲಂಕೇಶ್, ಅರುಣೋದಯ ಕಲಾತಂಡದ ಮಂಜುಳ ಉಪಸ್ಥಿತರಿದ್ದರು. ಆರ್ಮಗಂ ಸ್ವಾಗತಿಸಿದರೆ, ಸಹನಾ ನಿರೂಪಿಸಿದರು. ಇದೇ ಸಂದರ್ಭದಲ್ಲಿ 30 ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿ ಮಾನವೀಯತೆ ಮೆರೆದರು.