ರೈತ ವಿರೋಧಿ ಪಕ್ಷಗಳನ್ನು ಸೋಲಿಸಿ ಎಂದು ಚಾಮರಾಜನಗರದಲ್ಲಿ ಪ್ರಚಾರ ಜಾಥಾ ನಡೆಸುತ್ತಿದ್ದ ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಪ್ರಚಾರ ನಡೆಸದಂತೆ ಬೆದರಿಕೆ ಹಾಕಿದ್ದಾರೆ. ಹಲ್ಲೆಯಿಂದಾಗಿ ಸಿಡಿದೆದ್ದಿರುವ ರೈತ ಸಂಘದ ಮುಖಂಡರು ತಮ್ಮ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘವು ಏಪ್ರಿಲ್ 17ರಿಂದ ‘ಬಿಜೆಪಿ ಮತ್ತು ಮೈತ್ರಿ ಪಕ್ಷಗಳನ್ನು ಸೋಲಿಸಿ – ರೈತ ಸಮುದಾಯವನ್ನು ಉಳಿಸಿ’ ಅಭಿಯಾನ ನಡೆಸುತ್ತಿದೆ. ಅಭಿಯಾನದ ಭಾಗವಾಗಿ ಬುಧವಾರ ಚಾಮರಾಜನಗರದ ಬೀದಿಗಳಲ್ಲಿ ಪ್ರಚಾರ ಜಾಥಾ ನಡೆದಿದೆ. ಈ ವೇಳೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಮಹೇಶ್ ಪ್ರಭು ಹಾಗೂ ಕೆಲವು ಮುಖಂಡರ ಮೇಲೆ ಬಿಜೆಪಿಗರು ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿದ ಬಿಜೆಪಿ ವಿರುದ್ಧ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ವಿರುದ್ಧ ತನ್ನ ಅಭಿಯಾನವನ್ನು ತೀವ್ರಗೊಳಿಸಲು ಮುಂದಾಗಿದೆ. “ನಮ್ಮ ಅಭಿಯಾನವನ್ನು ನಾವು ಮತ್ತಷ್ಟು ಬಿರುಸುಗೊಳಿಸುತ್ತೇವೆ. ಈ ಬಾರಿ ರೈತರೆಲ್ಲರೂ ಕೂಡಿ ಈ ದ್ರೋಹಿ ಪಕ್ಷಗಳಿಗೆ ಓಟಿನ ಏಟು ನೀಡುತ್ತೇವೆ. ಎರಡನೇ ಸುತ್ತಿನ ಮತದಾನ ನಡೆಯಲಿರುವ ಉತ್ತರ ಭಾಗದ ಕ್ಷೇತ್ರಗಳಲ್ಲೂ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರೆಸುತ್ತೇವೆ. ರೈತಕುಲದ ಈ ಹೋರಾಟಕ್ಕೆ ತಮ್ಮೆಲ್ಲರ ಸಹಕಾರವಿರಲಿ ಎಂದು ಮನವಿ ಮಾಡಿಕೊಳ್ಳುತ್ತೇವೆ. ಈ ದಾಳಿಯನ್ನು ತಾವು ತೀವ್ರ ರೀತಿಯಲ್ಲಿ ಖಂಡಿಸಬೇಕೆಂದು ಮತ್ತೊಮ್ಮೆ ನೆನಪಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
“ರೈತರ ಸಾಲ ಮನ್ನಾ ಮಾಡದ, ರೈತರ ಬೆಳೆಗೆ ಎಂಎಸ್ಪಿ ನೀಡದ, ಬರದಿಂದ ರೈತರು ಕಂಗೆಟ್ಟಿದ್ದರೂ ಬಿಡಿಗಾಸ ಪರಿಹಾರ ನೀಡದ ಕೇಂದ್ರದ ಬಿಜೆಪಿ ಮತ್ತು ಮೈತ್ರಿ ಪಕ್ಷಗಳಿಗೆ ಮತ ನೀಡುವುದಿಲ್ಲ” ಎಂಬ ಪ್ರತಿಜ್ಞೆ ಸ್ವೀಕರಿಸುತ್ತಿದ್ದಾರೆ. ರೈತರ ಈ ಅಭಿಯಾನ ರೈತವಿರೋಧಿ, ಕಾರ್ಪೋರೇಟ್ ಸಾಕು ನಾಯಿಯಾಗಿರುವ ಬಿಜೆಪಿಎ ನುಂಗಲಾರದ ತುತ್ತಾಗಿ ಪರಿಣಮಿಸಿದೆ” ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಕಾರ್ಯಾಧ್ಯಕ್ಷ ವೀರಸಂಗಯ್ಯ ಅವರು ಈ ಬಗ್ಗೆ ಪ್ರಕಟಣೆಯಲ್ಲಿ ತಳಿಸಿದ್ದಾರೆ.