ಅನಾರೋಗ್ಯದಿಂದ ವಿದ್ಯಾರ್ಥಿನಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಮಂಡ್ಯನಗರದಲ್ಲಿ ನಡೆದಿದೆ.
ಮಂಡ್ಯ ನಗರದ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವರ್ಷಾ(18) ಮೃತ ವಿದ್ಯಾರ್ಥಿನಿ.
ಮಂಡ್ಯನಗರದ ಕಲ್ಲಹಳ್ಳಿ ವಿ.ವಿ.ನಗರದ ನಿವಾಸಿಗಳಾದ ಅನಿತಾ ಹಾಗೂ ಹೇಮಚಂದ್ರು(ಮಂಜು) ಅವರ ಪುತ್ರಿ ವರ್ಷಾ ಪ್ರಸಕ್ತ 2023- 24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದರು. ಇದೇ ತಿಂಗಳ 18ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಸಿದ್ದತೆ ನಡೆಸಿದ್ದರು.
ಕಳೆದ ಮುರ್ನಾಲ್ಕು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವರ್ಷಾ ಅವರನ್ನು ಶನಿವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಅಪೆಂಡಿಸ್ ಶಸ್ತ್ರಚಿಕಿತ್ಸೆ ನಡೆಯಬೇಕಿದ್ದು, ಆ ವೇಳೆ ಹೃದಯಾಘಾತ ಸಂಭವಿಸಿ, ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಯೂ ಹೃದಯ ಸ್ಥಂಭನ ಉಂಟಾಗಿ, ಚಿಕಿತ್ಸೆ ಫಲಿಸಿದೆ ಸೋಮವಾರ ಮುಂಜಾನೆ ಮೃತಪಟ್ಟರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ರೆಡ್ಕ್ರಾಸ್ ಸಂಸ್ಥೆ ನಿರ್ದೇಶಕ ರಂಗಸ್ವಾಮಿ, ಮಾಂಡವ್ಯ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು. ಮೃತರ ಅಂತ್ಯಕ್ರಿಯೆ ಕಲ್ಲಹಳ್ಳಿಯ ಸ್ಮಶಾನದಲ್ಲಿ ಸೋಮವಾರ ಸಂಜೆ ಜರುಗಿತು.