Wednesday, May 15, 2024

ಪ್ರಾಯೋಗಿಕ ಆವೃತ್ತಿ

ಮೋದಿಜೀಯ ಅಶ್ವಮೇಧದ ಕುದುರೆಯನ್ನು ಹಿಡಿದು ಕಟ್ಟಿ ಹಾಕುತ್ತಿರುವ ಧೃವ್ ರಾಠಿ !!

ರಾಮಾಯಣದಲ್ಲಿ ರಾಮನ ಅಶ್ವಮೇಧ ಯಾಗದ ಕುದುರೆಯನ್ನು ಹಿಡಿದು ಲವ-ಕುಶ ಕಟ್ಟಿ ಹಾಕಿದ ಪ್ರಸಂಗವಿದೆ. ಅದೇ ರೀತಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ಅಶ್ವಮೇಧ ಕುದುರೆಯನ್ನು ಮುಟ್ಟಲು ಇಲ್ಲಿಯ ತನಕ ಯಾವ ವಿರೋಧ ಪಕ್ಷದ ನಾಯಕ, ಯುವನಾಯಕರು ಹೆದರುತ್ತಿದ್ದರು. ಇಂತಹ ಸಂದರ್ಭದಲ್ಲಿ ಯಕಶ್ಚಿತ್ ಒಬ್ಬ ಯೂಟ್ಯೂಬರ್ ಧೃವ ರಾಠಿ ಎಂಬ ಯುವಕ ತನ್ನ ಸ್ಫೋಟಕ ವಿಡಿಯೋಗಳ ಮೂಲಕ ಮೋದಿಯವರ ಆಡಳಿತ ಸರ್ವಾಧಿಕಾರದತ್ತ ಸಾಗುತ್ತಿರುವ ಬಗ್ಗೆ, ಮೋದಿಯವರ ಜನ ವಿರೋಧಿ ನೀತಿಗಳು, ಎಲೆಕ್ಟ್ರೋರಲ್ ಬಾಂಡ್ ಹಗರಣ, ಗುಜರಾತ್ ಲಾಬಿಗಳ ಬಗ್ಗೆ ವಿವಿಧ ವಿಡಿಯೋಗಳನ್ನು ಮಾಡುತ್ತಾ ಮೋದಿಜೀಯವರ ಚುನಾವಣಾ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿರುವುದಂತೂ ಸತ್ಯ ಸಂಗತಿಯಾಗಿದೆ.

ಧ್ರುವ್ ರಾಠಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಮಾಡಿದಂತಹ ಜನ ವಿರೋಧಿ, ರೈತ ವಿರೋಧಿ ನೀತಿಗಳು, ವಿರೋಧಪಕ್ಷಗಳನ್ನು ಸದೆ ಪಡೆಯಲು ಐಟಿ, ಇಡಿ, ಸಿಬಿಐ ಅಂತಹ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿರುವ ಬಗ್ಗೆ, ಭಾರತದ ಇತಿಹಾಸ ಕಂಡ ಅತಿ ದೊಡ್ಡ ಹಗರಣ ಎಲೆಕ್ಟ್ರೋರಲ್ ಬಾಂಡ್, ನಿರುದ್ಯೋಗ, ಬೆಲೆ ಏರಿಕೆ ಮೊದಲಾದ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಅತ್ಯಂತ ಸರಳವಾಗಿ ತನ್ನ ವಿಡಿಯೋಗಳಲ್ಲಿ ಹೇಳುವ ಮೂಲಕ ಕೋಟ್ಯಾಂತರ ಭಾರತೀಯರ ಮನಸ್ಸುಗಳಲ್ಲಿ ಮೋದಿಯವರ ಆಡಳಿತದ ಬಗ್ಗೆ ಅಸಂಖ್ಯಾತ ಪ್ರಶ್ನೆಗಳ ಅಲೆಯನ್ನು ಏಳಿಸಿದ್ದಾನೆ.

ಈತ ಮಾಡಿದ ‘ಡರಾ ಹುವಾ ಡಿಕ್ಟೇಟರ್?’ ಎಂಬ ವಿಡಿಯೋವನ್ನು ಸುಮಾರು ಮೂರು ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. ಎಲೆಕ್ಟ್ರೋರಲ್ ಬಾಂಡ್ ಹಗರಣ, ಫಾರ್ಮಾ ಸ್ಕ್ಯಾಮ್, ರಿಯಾಲಿಟಿ ಆಫ್ ಬ್ರೈನ್ ವಾಶ್, ವಾಟ್ಸಾಪ್ ಯೂನಿವರ್ಸಿಟಿ ಮೊದಲಾದ ವಿಡಿಯೋಗಳು ಕೋಟಿ ಕೋಟಿ ಜನರ ಮನಸ್ಸು ಮುಟ್ಟಿದೆ. ರಿಯಾಲಿಟಿ ಆಫ್ ಬ್ರೈನ್ ವಾಷ್ ಎಂಬ ವಿಡಿಯೋ ಮೂಲಕ ಮೋದಿ ಅವರ ಬಗ್ಗೆ ದೊಡ್ಡ ಸಂಖ್ಯೆಯಲ್ಲಿ ಅಂಧ ಭಕ್ತರಾಗಿರುವ ಬಗ್ಗೆ ಹೇಳಿದಂತಹ ವಿಡಿಯೋ, ನಿರುದ್ಯೋಗ ಸಮಸ್ಯೆ,ಬೆಲೆ ಏರಿಕೆಯ ಬಗ್ಗೆ ಮಾಡಿರುವ ವೀಡಿಯೋವನ್ನು ಕೋಟ್ಯಾಂತರ ಭಾರತೀಯರು ವೀಕ್ಷಣೆ ಮಾಡಿದ್ದಾರೆ. ಅವರೆಲ್ಲ ಮೋದಿಯವರ ಆಡಳಿತದ ಬಗ್ಗೆ ಪ್ರಶ್ನೆಗಳನ್ನು ಎತ್ತುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಮೋದಿ ಹಠಾವೋ ದೇಶ್ ಬಚಾವೋ ಎಂಬ ಮಿಷನ್ 100 ಸಿಆರ್ ಎಂಬ ಹಾಡು ಕೂಡ ಯೂಟ್ಯೂಬ್ ನಲ್ಲಿದ್ದು ಇಂದು ಕೋಟ್ಯಾಂತರ ಭಾರತೀಯರಲ್ಲಿ ಮೋದಿಯ ಆಡಳಿತದಲ್ಲಿ ಎಷ್ಟೆಲ್ಲಾ ಸುಳ್ಳುಗಳಿದ್ದವು ಎಂಬುದನ್ನು ಎತ್ತಿ ತೋರಿಸಿದೆ. ಎಲೆಕ್ಟ್ರೋವಲ್ ಬಾಂಡ್ ಎಂಬ ದೊಡ್ಡ ಹಗರಣ ಕೂಡ ಮೋದಿಯವರು ಆಡಳಿತದಲ್ಲಿ ಭ್ರಷ್ಟಾಚಾರ ವಿದೆ.ಅವರ ಕಾಲದಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆದಿದೆ. ಬಾಂಡ್ ಪಡೆಯಲು ಕಳಪೆ ಔಷಧ ಕಂಪನಿಗಳು ನೀಡಿರುವ ಬಾಂಡ್,ಬಾಂಡ್ ಕೊಡು ಕೋಟ್ಯಾಂತರ ಮೊತ್ತದ ಕೆಲಸ ಪಡೆ ಎಂಬ ನೀತಿಯ ಬಗ್ಗೆ, ಜನರನ್ನು ಒಡೆದಾಳುವ ಬಗ್ಗೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್,ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಜೈಲಿಗಟ್ಟಿರುವ ಬಗ್ಗೆ, ಸಂವಿಧಾನ, ಪ್ರಜಾಪ್ರಭುತ್ವ ದೇಶ ಸರ್ವಾಧಿಕಾರದತ್ತ ಸಾಗುತ್ತಿರುವ ಬಗ್ಗೆ ಜನರ ಮನಸ್ಸಿನಲ್ಲಿ ಕಂಪನಗಳನ್ನು ಎಬ್ಬಿಸಿದ್ದಾರೆ. ಸರ್ವಾಧಿಕಾರಿ ತನ್ನ ಅಹಂಕಾರ, ಅಧಿಕಾರ, ಹಣದ ಬಗ್ಗೆ ಕಾಳಜಿ ವಹಿಸುತ್ತಾನೆಯೇ ಹೊರತು ಜನರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎನ್ನುವ ಧ್ರುವರಾಠಿಯವರ ಮಾತು ಜನರ ಮನ ಮುಟ್ಟಿದೆ.

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳಿಗಿಂತಲೂ ಒಂದು ಕೈ ಮುಂದೆ ಎನ್ನುವಂತೆ ಧ್ರುವ ರಾಠಿ ವೀಡಿಯೋಗಳು ಭಾರತೀಯರಲ್ಲಿ ಮೋದಿಯವರ ಆಡಳಿತದ ಬಗ್ಗೆ ಪ್ರಶ್ನೆಗಳನ್ನು ಎತ್ತುವಂತೆ ಮಾಡಿರುವುದು ಬಿಜೆಪಿ ಮತ್ತು ಭಕ್ತರ ಸಿಟ್ಟಿಗೆ ಕಾರಣವಾಗಿದ್ದು,ಜರ್ಮನಿಯಲ್ಲಿರುವ ಧ್ರುವ ರಾಠಿ ಭಾರತಕ್ಕೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದ್ದಾರೆ ಎಂದರೆ ಅವರ ಕೋಪ ಎಲ್ಲಿಗೆ ತಲುಪಿದೆ ಎಂಬುದು ಅರ್ಥವಾಗುತ್ತದೆ.ಬಿಜೆಪಿ ಭಕ್ತರ ಸವಾಲನ್ನು ಸ್ವೀಕರಿಸಿರುವ ಧ್ರುವ ರಾಠಿ ಜೂನ್ 4 ರಂದು ಭಾರತಕ್ಕೆ ಬರುವುದಾಗಿ ಹೇಳಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಚುನಾವಣಾ ಜುಮ್ಲಾ ಅಂದರೆ ಗಿಮಿಕ್ ಗಳ ಬಗ್ಗೆ ಜನರು ಆಲೋಚಿಸುವಂತೆ ಮಾಡುವ ಮೂಲಕ ವಿರೋಧ ಪಕ್ಷಗಳೂ ಕೂಡ ಮಾಡದಂತಹ ಕೆಲಸ ನಿರ್ವಹಿಸಿರುವ ಯುಟ್ಯೂಬರ್ ಧ್ರುವ್ ರಾಠಿ ಮೋದಿಯ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕುತ್ತಿರುವುದಂತೂ ಸತ್ಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!