ಮಂಡ್ಯ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ವೆಲ್ ಫೇರ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ನಟರಾಜ್ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಡ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ನಟರಾಜು ಅವರು ಹೃದಯಘಾತದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ರಜೆಯಲ್ಲಿದ್ದರು. ಇಂದು ಅವರು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಮಂಡ್ಯ ಡಿಎಚ್ಓ ಡಾ.ಮೋಹನ್ ಕರ್ತವ್ಯಕ್ಕೆ ಹಾಜರಾಗಲು ಡಾ.ನಟರಾಜು ಅವರಿಗೆ ಅನುಮತಿ ನೀಡದ ಕಾರಣ ಅವರು ಮನ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಡಾ.ನಟರಾಜು ಅವರು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಡಿಹೆಚ್ಓ ಸ್ಪಷ್ಟನೆ
ಡಾ. ನಟರಾಜು ಆತ್ಮಹತ್ಯೆಗೆ ಮಂಡ್ಯ ಡಿಎಚ್ಓ ಡಾ. ಮೋಹನ್ ಅವರು ನೀಡುತ್ತಿದ್ದ ಕಿರುಕುಳವೇ ಕಾರಣ ಎಂಬ ಆರೋಪಗಳನ್ನು ಅಲ್ಲಗಳೆದಿರುವ ಡಿಎಚ್ಓ ಡಾ. ಮೋಹನ್ ಅವರು ,ಡಾ.ನಟರಾಜು ಅವರಿಗೆ ಕಳೆದ ಕೆಲವು ದಿನಗಳ ಹಿಂದೆ ಹೃದಯಾಘಾತವಾಗಿ ದೀರ್ಘಾವಧಿಯಿಂದ ರಜೆಯಲ್ಲಿದ್ದರು. ಅವರ ಕುಟುಂಬದೊಂದಿಗೆ ಅವರಿಗೆ ಮನಸ್ತಾಪವಿತ್ತು. ಡಾ.ನಟರಾಜು ಅವರು ಮಾನಸಿಕ ರೋಗದಿಂದಲೂ ಬಳಲುತ್ತಿದ್ದು, ಈ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರಬಹುದು. ನಾನು ಅವರಿಗೆ ಯಾವ ಕಿರುಕುಳವನ್ನು ನೀಡಿಲ್ಲ ಎಂದು ಸ್ಪಷ್ಠನೆ ನೀಡಿದ್ದಾರೆ.