ರೈತರ ಆರ್ಥಿಕ ಬದುಕು ಸುಧಾರಣೆಯಾಗಿ ಆತ್ಮಹತ್ಯೆ ಸಂಪೂರ್ಣ ಇಲ್ಲದಂತಾಗಲಿ ಎನ್ನುವುದೇ ನಮ್ಮೆಲ್ಲರ ಆಶಯ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.
ಮಂಡ್ಯ ನಗರದ ತೋಟಗಾರಿಕೆ ಇಲಾಖೆ ಬಳಿ ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ ಮತ್ತು ಕೃಷಿಕ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ರೈತರ ದಿನ ಪ್ರಯುಕ್ತ ಸಾವಯವ ಕೃಷಿಕರಿಗೆ ಅಭಿನಂದನೆ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ, ಹಿಂದೆ ಸಾಕಷ್ಟು ರೈತರು ಆತ್ಮಹತ್ಯೆದಾರಿ ಹಿಡಿದು ಕುಟುಂಬವನ್ನೇ ಅನಾಥರನ್ನಾಗಿ ಮಾಡಿ ಬಿಡುತ್ತಿದ್ದರು, ರೈತರ ಸಮಸ್ಯೆಗಳು ಸಂಪೂರ್ಣವಾಗಿ ಸರ್ಕಾರಗಳು ಬಗೆಹರಿಸಲಿ, ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆತರೆ ಅರ್ಯಾಕೆ ಆತ್ಮಹತ್ಯೆದಾರಿ ಹಿಡಿಯುತ್ತಾರೆ ಎಂದು ನುಡಿದರು.
ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಡಿ.23ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಿ, ರೈತರೊಂದಿಗೆ ಸಂವಾದ ಕಾರ್ಯಕ್ರಮಗಳು ನಡೆಯುತ್ತವೆ, ರೈತರ ಕಲ್ಯಾಣಕ್ಕೆ ಅವರು ತಂದ ಯೋಜನೆಗಳು ಇಂದಿಗೂ ಜನಪ್ರಿಯ. ಕೃಷಿ ಆರ್ಥಿಕತೆಯ ಮಹತ್ವವನ್ನು ಅವರು ಅರಿತು ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಯೋಜನೆಗಳನ್ನು ತಂದಿದ್ದರು ಎಂದು ಸ್ಮರಿಸಿದರು.
ಸಾವಯವ ಕೃಷಿಕ ಬೆಟ್ಟೆತಿಮ್ಮನಕೊಪ್ಪಲು ಸೋಮೇಗೌಡ, ಪೂರ್ವಿಕರ ಬೆಳೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಬೆಳೆಯುವುದು ಅವಶ್ಯಕ, ಇಂದಿನ ದಿನಗಳಲ್ಲಿ ಮಾರುಕಟ್ಟೆಯದ್ದೇ ಸಮಸ್ಯೆ, ದಲ್ಲಾಳಿಗಳಿಲ್ಲದೆ ಮಾರಾಟವೇ ಆಗದ ಸ್ಥಿತಿಯಲ್ಲಿದ್ದೇವೆ ಇದೆ ತಪ್ಪಬೇಕು, ನೇರವಾಗಿ ಕೃಷಿಕನಿಂದ ಗ್ರಾಹಕರಿಗೆ ವಸ್ತುಗಳು, ಆಹಾರಪದಾರ್ಥಗಳು ಲಭ್ಯವಾಗಬೇಕು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಸಾವಯವ ಕೃಷಿಕರಾದ ಎಂ.ಸಿ.ಕಾಂತರಾಜು, ಬನ್ನಹಳ್ಳಿ ಶಿವಣ್ಣ, ಬೆಟ್ಟೆತಿಮ್ಮನಕೊಪ್ಪಲು ಸೋಮೇಗೌಡ, ಪುರುಷೋತ್ತಮ್, ಮಾರಗೌಡನಹಳ್ಳಿ ದರ್ಶನ್ಗೌಡ ಅವರನ್ನು ಗಣ್ಯರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಖಜಾಂಚಿ ರಮೇಶ್, ನಿರ್ದೇಶಕಿ ನೀನಾಪಟೇಲ್, ಪ್ರತಿಭಾಂಜಲಿ ಪ್ರೊ.ಡೇವಿಡ್, ಸಾವಯವ ಕೃಷಿಕರು ಹಾಜರಿದ್ದರು.