ಮಂಡ್ಯದ ಪಿಇಎಸ್ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯಗಳ ವಾಲಿಬಾಲ್ ಕ್ರೀಡಾಕೂಟದಲ್ಲಿ ತಮಿಳುನಾಡು ಚನ್ನೈನ ಎಸ್.ಆರ್.ಎಂ-ಐ.ಎಸ್.ಟಿ (SRM-IST) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ವಾಲಿಬಾಲ್ ಫೈನಲ್ ಹಣಾಹಣಿಯಲ್ಲಿ ತಮಿಳುನಾಡಿನ ಮದ್ರಾಸ್ ವಿಶ್ವವಿದ್ಯಾಲಯ ತಂಡದ ವಿರುದ್ದ ರೋಚಕ ಹಣಾಹಣಿ ನಡೆಸಿದ ಚೆನ್ನೈ 24-26, 25-19, 25-14, 17-25 ಹಾಗೂ 15-12 ಸೆಟ್ ಗಳಿಂದ ಮದ್ರಾಸ್ ತಂಡವನ್ನು ಮಣಿಸಿತು. ತೀವ್ರ ಪೈಪೋಟಿ ನಡೆಸಿ ಪರಾಜಿತವಾದ ಮದ್ರಾಸ್ ವಿವಿ ತಂಡ ರನ್ನರ್ ಅಪ್ ಆಗಿ ಸ್ಥಾನ ಪಡೆಯಿತು.
ಕ್ರೀಡಾಕೂಟದಲ್ಲಿ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯ ಮೂರನೇ ಸ್ಥಾನ ಪಡೆದರೆ, ಕರ್ನಾಟಕದ ಮಂಗಳೂರು ವಿಶ್ವವಿದ್ಯಾನಿಲಯ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಕ್ರೀಡಾಕೂಟದಲ್ಲಿ ದಕ್ಷಿಣ ಭಾರತದ ಒಟ್ಟು 5 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ ವಿಶ್ವವಿದ್ಯಾನಿಲಯಗಳ 150ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದರು, ಈ ಕ್ರೀಡಾಕೂಟದಲ್ಲಿ 1,500 ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಒಂದೂವರೆ ದಶಕದ ನಂತರ ಮಂಡ್ಯದಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ವಾಲಿಬಾಲ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸುವುದಕ್ಕಾಗಿ ಕಳೆದ 1 ತಿಂಗಳಿನಿಂದಲೇ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ನೇತೃತ್ವದಲ್ಲಿ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಇದರಿಂದಾಗಿ ಕಳೆದ 4 ದಿನಗಳಿಂದ ಕ್ರೀಡಾಕೂಟವು ಯಾವುದೇ ಅಡೆತಡೆಗಳಿಲ್ಲದೇ ಯಶಸ್ವಿಯಾಗಿ ಜರುಗಿತು.
ವಿಜೇತ ತಂಡಗಳಿಗೆ ಪಿಇಟಿ ಅಧ್ಯಕ್ಷ ವಿಜಯ್ ಆನಂದ್ ಸೇರಿದಂತೆ ಹಲವು ಗಣ್ಯರು ಪಾರಿತೋಷಕ ಹಾಗೂ ಬಹುಮಾನಗಳನ್ನು ವಿತರಿಸಿದರು.