ಮಣಿಪುರ ಹಿಂಸಾಚಾರದ ಕುರಿತು ಅಲ್ಲಿಯ ಕೆಲವು ಪತ್ರಕರ್ತರು ಏಕಪಕ್ಷೀಯವಾಗಿ ವರದಿ ಮಾಡಿದ್ದಾರೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಸತ್ಯಶೋಧನಾ ತಂಡ ಶನಿವಾರ ವರದಿ ಬಿಡುಗಡೆ ಮಾಡಿದೆ. ಈ ವರದಿಗೆ ಸಂಬಂಧಿಸಿದಂತೆ ಸತ್ಯಶೋಧನಾ ತಂಡದ ಮೂವರ ವಿರುದ್ಧ ಮಣಿಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66Aಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದರೂ ಸಹ ಪೊಲೀಸರು ಜಾರಿಯಲ್ಲಿಟ್ಟಿದ್ದಾರೆ. ಅನೇಕ ಸಂದರ್ಭಗಳಲ್ಲಿ, ಈ ನಿಬಂಧನೆಯ ಅಡಿಯಲ್ಲಿ ಯಾರನ್ನೂ ವಿಚಾರಣೆಗೆ ಒಳಪಡಿಸಬಾರದು ಎಂದು ನ್ಯಾಯಾಲಯವು ನಿರ್ದೇಶಿಸಿದೆ.
”ಆಕ್ಷೇಪಾರ್ಹ ಮತ್ತು ಬೆದರಿಕೆಯ” ಪೋಸ್ಟಗಳನ್ನು ಆನ್ಲೈನ್ ಬರೆಯುವ ವ್ಯಕ್ತಿಗಳನ್ನು ಬಂಧಿಸಲು ಮತ್ತು ಜೈಲಿನಲ್ಲಿಡಲು ಸರ್ಕಾರಕ್ಕೆ ಸೆಕ್ಷನ್ 66A ಅಡಿಯಲ್ಲಿ ಅಧಿಕಾರವನ್ನು ನೀಡಿದೆ.
ಸತ್ಯಶೋಧನಾ ತಂಡದ ಮೂವರ ವಿರುದ್ಧ ”ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು, ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಉದ್ದೇಶಪೂರ್ವಕವಾಗಿ ಮಾತನಾಡುವುದು ಮತ್ತು ಸಾರ್ವಜನಿಕವಾಗಿ ಗಲಭೆಗೆ ಪ್ರಚೋದಿಸುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವರದಿಯ ಲೇಖಕರಾದ ಸೀಮಾ ಗುಹಾ, ಭರತ್ ಭೂಷಣ್, ಸಂಜಯ್ ಕಪೂರ್ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷೆ ಸೀಮಾ ಮುಸ್ತಫಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವರದಿಯು “ಸುಳ್ಳು, ಮತ್ತು ಪ್ರಾಯೋಜಿತ” ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ. ವರದಿಯಲ್ಲಿನ ಫೋಟೋವು ಕುಕಿ ಮನೆಯಿಂದ ಹೊಗೆ ಏರುತ್ತಿದೆ ಎಂದು ತಪ್ಪಾಗಿ ಹೇಳಲಾಗಿದೆ, ಆದರೆ ಅದು ವಾಸ್ತವವಾಗಿ ಅರಣ್ಯ ಅಧಿಕಾರಿಯ ಕಚೇರಿಯಾಗಿದೆ. ವರದಿಯು ಸುಳ್ಳು ಮತ್ತು ಕುಕಿ ಉಗ್ರಗಾಮಿಗಳಿಂದ ಪ್ರಾಯೋಜಿತವಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.