ಮಧ್ಯಪ್ರದೇಶದ ಜನ ಆಶೀರ್ವಾದ ಯಾತ್ರೆಗೆ ತನಗೆ ಆಮಂತ್ರಣ ನೀಡದ ಬಗ್ಗೆ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದಿದ್ದು, ನನ್ನನ್ನು ಆಹ್ವಾನಿಸಿದ್ದರೂ ಯಾತ್ರೆಗೆ ಹೋಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನಾನು ಯಾತ್ರೆಯಲ್ಲಿ ಭಾಗವಹಿಸಿದರೆ ನಾನು ಜನರ ಪ್ರಮುಖ ಆಕರ್ಷಣೆಯಾಗುತ್ತೇನೆ, ಇದರಿಂದ ಬಿಜೆಪಿ ನಾಯಕರಿಗೆ ಹಿಂಜರಿಕೆಯಾಗುತ್ತದೆ ಎಂದು ಕರೆದಿಲ್ಲ ಎಂದು ಹೇಳಿದ್ದಾರೆ.
ನಾನು ಅಲ್ಲಿದ್ದರೆ, ಇಡೀ ಸಾರ್ವಜನಿಕರ ಗಮನವು ನನ್ನ ಮೇಲೆ ಬೀಳುತ್ತದೆ. ಇದರಿಂದ ಬಿಜೆಪಿ ನಾಯಕರು ಹೆದರುತ್ತಾರೆ ಎಂದು 64 ವರ್ಷದ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ಅವರು ಹೇಳಿದ್ದಾರೆ.
ಬಿಜೆಪಿಯ ಹಿರಿಯ ನಾಯಕಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸ್ವಪಕ್ಷದ ನಾಯರ ವಿರುದ್ಧವೇ ಟೀಕೆಯನ್ನು ಮಾಡಿದ್ದು , ಬಿಜೆಪಿಯ ಜನ ಆಶೀರ್ವಾದ ಯಾತ್ರೆಗೆ ನನ್ನನ್ನು ಆಹ್ವಾನಿಸಿಲ್ಲ. ಆಹ್ವಾನ ನೀಡಿದರೆ ಅಥವಾ ನೀಡದಿದ್ದರೆ ನಾನೇನು ಪ್ರಾಮುಖ್ಯತೆ ಕೊಡುವುದಿಲ್ಲ. ಈಗ ನನ್ನನ್ನು ಆಹ್ವಾನಿಸಿದರೂ ನಾನು ಹೋಗುವುದಿಲ್ಲ. ಉದ್ಘಾಟನೆ ಅಥವಾ ಸೆ.25ರ ದಿನದ ಸಮಾರೋಪ ದಿನದ ಕಾರ್ಯಕ್ರಮಕ್ಕೆ ನಾನು ಹಾಜರಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜನ ಆಶೀರ್ವಾದ ಯಾತ್ರೆಗೆ ಚಾಲನೆಯನ್ನು ನೀಡಲಿದ್ದಾರೆ. ಯಾತ್ರೆಯು 2018ರಲ್ಲಿ 30 ಕ್ಷೇತ್ರಗಳಲ್ಲಿ ಬಿಜೆಪಿ 24 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿದ್ದ ವಿಂದ್ಯಾ ಪ್ರದೇಶದಲ್ಲಿ ಸಾಗಲಿದೆ.
ಮಧ್ಯಪ್ರದೇಶದಲ್ಲಿ 2003ರಲ್ಲಿ ಬಿಜೆಪಿ ಉಮಾಭಾರತಿ ನೇತೃತ್ವದಲ್ಲಿ ಅಭೂತಪೂರ್ವ ಗೆಲವುನ್ನು ಸಾಧಿಸಿದ್ದರು. ಬಳಿಕ ಅವರನ್ನು 2005ರಲ್ಲಿ ಅಶಿಸ್ತಿನ ಕಾರಣಕ್ಕಾಗಿ ಬಿಜೆಪಿಯಿಂದ ಉಚ್ಛಾಟಣೆ ಮಾಡಲಾಗಿತ್ತು. ಮತ್ತೆ ಅವರು 2011ರಲ್ಲಿ ಬಿಜೆಪಿಗೆ ಮರು ಸೇರ್ಪಡೆಗೊಂಡಿದ್ದರು.
ಮಧ್ಯಪ್ರದೇಶದ ಬಿಜೆಪಿ ಘಟಕದ ವಿರುದ್ಧ ಟೀಕೆ ಮಾಡಿದರೂ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗಿನ ತನ್ನ ಬಾಂಧವ್ಯವನ್ನು ಮುಂದುವರಿಸುವುದಾಗಿ ಉಮಾ ಭಾರತಿ ಹೇಳಿದ್ದಾರೆ.