ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಮುಂದುವರಿಸುವ ಬಗ್ಗೆ ಕೇಂದ್ರ ನಾಯಕರ ಜೊತೆಗೆ ಚರ್ಚೆ ನಡೆಯುತ್ತಿದೆ. 2-3 ದಿನಗಳಲ್ಲಿ ಈ ಬಗ್ಗೆ ಗೊತ್ತಾಗುತ್ತದೆ. ಮೈತ್ರಿ ದೆಹಲಿ ಮಟ್ಟದಲ್ಲಿ ಆಗಿರುವುದು. ಕೇಂದ್ರೀಯ ಸಂಸದೀಯ ಮಂಡಳಿ ಈ ಬಗ್ಗೆ ತೀರ್ಮಾನ ಮಾಡುತ್ತದೆ. ಈ ಬಗ್ಗೆ ಕುಮಾರಸ್ವಾಮಿ ಮತ್ತು ಅಮಿತ್ ಶಾ ಅವರು ಏನು ಮಾತನಾಡಿದ್ದಾರೆ ಎನ್ನುವುದು ಗೊತ್ತಿಲ್ಲ” ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
“2019ರ ಲೋಕಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಜ್ವಲ್ ರೇವಣ್ಣರನ್ನು ಪಕ್ಕದಲ್ಲೇ ಕೂರಿಸಿಕೊಂಡು ಪ್ರಚಾರ ಮಾಡಿದ್ದರು. ಹಾಸನ ಅಭಿವೃದ್ಧಿಗೆ ಪ್ರಜ್ವಲ್ ರೇವಣ್ಣರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದರು. ಯಂಗ್ ಲೀಡರ್, ವಿಷನ್ ಲೀಡರ್ ಎಂದು ಸಿದ್ದರಾಮಯ್ಯ ಆ ಸಂದರ್ಭದಲ್ಲಿ ಹೇಳಿದ್ದರು” ಎಂದು ಹೇಳುತ್ತಾ 2019ರಲ್ಲಿ ಸಿದ್ದರಾಮಯ್ಯ, ಹೆಚ್.ಡಿ ದೇವೇಗೌಡರು ಪ್ರಜ್ವಲ್ ಪರ ಜಂಟಿಯಾಗಿ ಪ್ರಚಾರ ಮಾಡಿದ್ದ ವಿಡಿಯೋವನ್ನು ಆರ್. ಅಶೋಕ್ ಅವರು ಮಾಧ್ಯಮದವರಿಗೆ ತೋರಿಸಿದರು.
“ಜೆಡಿಎಸ್ ಈಗಾಗಲೇ ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಅಮಾನತು ಮಾಡಿದೆ. ಪ್ರಜ್ವಲ್ ಊರಲ್ಲಿದ್ದಾಗ ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಪೊಲೀಸರು ಪತ್ರ ಬರೆಯಬೇಕಿತ್ತು. ಕೇಂದ್ರಕ್ಕೆ ಪತ್ರ ಕೂಡ ಬರೆದಿಲ್ಲ. ಇನ್ನು ಪಾತಾಳದಿಂದ ಹೇಗೆ ಹಿಡಿದು ತರ್ತಾರೆ. ತಪ್ಪು ಯಾರದು? ಯಾವುದೇ ಸರ್ಕಾರ ಇದ್ದರೂ ರಾಜತಾಂತ್ರಿಕ ಪಾಸ್ಪೋರ್ಟ್ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಪಾಸ್ ಪೋರ್ಟ್ ನೀಡಿಲ್ಲ” ಎಂದು ಆರ್ ಅಶೋಕ್ ತಿಳಿಸಿದರು.