ನಮ್ಮ ಸ್ವರ್ಣ ಟಿವಿ ವತಿಯಿಂದ ಮಂಡ್ಯ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮೇ 9 ರಿಂದ ಮೇ 13 ರವರೆಗೆ ಬೃಹತ್ ಆಹಾರ ಮೇಳ ಮತ್ತು ವಸ್ತು ಪ್ರದರ್ಶನ ಹಾಗೂ ಶೈಕ್ಷಣಿಕ ಮೇಳವನ್ನು ಆಯೋಜಿಸಲಾಗಿದೆ ಎಂದು ವಾಹಿನಿಯ ಮುಖ್ಯಸ್ಥ ಕಬ್ಬನಹಳ್ಳಿ ಶಂಭುಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇಳದಲ್ಲಿ 100 ಮಳಿಗೆಗಳನ್ನು ತೆರೆಯಲಾಗುವುದು, ಈ ಪೈಕಿ 60 ಮಳಿಗೆಗಳಲ್ಲಿ ವಿವಿಧ ರೀತಿಯ ಆಹಾರಗಳ ಮಾರಾಟ ಹಾಗೂ ಉಳಿದ ಮಳಿಗೆಗಳಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ರಾಜ್ಯದ ವಿವಿಧತೆಯಿಂದ ಹಲವಾರು ಮಂದಿ ಈ ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದರು.
ವಸ್ತು ಪ್ರದರ್ಶನದ ಜೊತೆಗೆ ಶೈಕ್ಷಣಿಕ ಮೇಳ ಆಯೋಜಿಸಲಾಗಿದ್ದು, ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 20 ರೂಪಾಯಿ ಪ್ರವೇಶ ದರವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ನಿಗದಿ ಪಡಿಸಲಾಗಿದ್ದು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಮೇ 9ರಂದು ಸಂಜೆ 6.30 ಗಂಟೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಲಿದ್ದು, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊಫೆಸರ್ ಜಯಪ್ರಕಾಶ್ ಗೌಡ ಅಧ್ಯಕ್ಷತೆಯಲ್ಲಿ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ. ಶ್ರೀನಿವಾಸ್, ಎಸ್.ಬಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸೇರಿದಂತೆ ಇತರ ಗಣ್ಯರು ಭಾಗವಹಿಸುವರು. ಹಿರಿಯ ಗಾಯಕರಾದ ಶ್ರೀನಿವಾಸ್ ಮತ್ತು ಮದನ್, ಗೊರವಾಲೆ ಚಂದ್ರಶೇಖರ್ ಮತ್ತು ತಂಡವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಸ್ವರ್ಣ ಟಿವಿ ಪಾಲುದಾರರಾದ ಶಂಕರ್, ವಿನಯ್ ಕುಮಾರ್ ಮಾತನಾಡಿ, ಇಂತಹ ಮೇಳಗಳು ಮಂಡ್ಯಕ್ಕೆ ಅವಶ್ಯಕವಾಗಿದ್ದು ಸಾರ್ವಜನಿಕರು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸ್ವರ್ಣ ವಾಹಿನಿಯ ಡಾ.ಸುಮಾರಾಣಿ ಶಂಭು ಉಪಸ್ಥಿತರಿದ್ದರು.