ನಟಿ ತ್ರಿಷಾ ಕೃಷ್ಣನ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದ ತಮಿಳಿನ ಖಳ ನಟ ಮನ್ಸೂರ್ ಅಲೀ ಖಾನ್ ಕೊನೆಗೂ ಕ್ಷಮೆ ಕೇಳಿದ್ದಾರೆ.
ನನ್ನ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯಲ್ಲ, ಕ್ಷಮೆಯೂ ಕೇಳಲ್ಲ ಎಂದು ಮನ್ಸೂರ್ ಅಲೀ ಖಾನ್ ಹೇಳಿದ್ದರು. ಚೆನ್ನೈ ಪೊಲೀಸರು ಅವರ ವಿರುದ್ದ ಪ್ರಕರಣ ದಾಖಲಿಸಿ ವಶಕ್ಕೆ ಪಡೆದ ಬೆನ್ನಲ್ಲೇ ವರಸೆ ಬದಲಾಯಿಸಿದ್ದಾರೆ.
ನಟ ವಿಜಯ್ ಮುಖ್ಯ ಪಾತ್ರದಲ್ಲಿ ಕಾಣಸಿಕೊಂಡಿರುವ ‘ಲಿಯೋ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ವಿಜಯ್ ಪತ್ನಿಯಾಗಿ ತ್ರಿಷಾ ನಟಿಸಿದ್ದಾರೆ. ಸಿನಿಮಾದಲ್ಲಿ ಮನ್ಸೂರ್ ಅಲೀ ಖಾನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮನ್ಸೂರ್, ನನಗೆ ತ್ರಿಷಾ ಅವರ ಜೊತೆ ಬೆಡ್ ರೂಂ ದೃಶ್ಯ ಸಿಗುತ್ತದೆ ಎಂದು ಭಾವಿಸಿದ್ದೆ. ಆದರೆ, ಈ ಸಿನಿಮಾದಲ್ಲಿ ಅದು ಇರಲಿಲ್ಲ. ನಾನು ಹಲವಾರು ಸಿನಿಮಾಗಳಲ್ಲಿ ಅತ್ಯಾಚಾರ ಪಾತ್ರಗಳನ್ನು ಮಾಡಿದ್ದೇನೆ. ಆ ರೀತಿಯ ಪಾತ್ರಗಳು ನನಗೇನು ಹೊಸತಲ್ಲ ಎಂದಿದ್ದರು. ಈ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಸಿನಿಮಾ ರಂಗ ಸೇರಿದಂತೆ ಹಲವೆಡೆಯಿಂದ ಮನ್ಸೂರ್ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಚೆನ್ನೈ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನ್ಸೂರ್ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ತ್ರಿಷಾ ಇನ್ಯಾವತ್ತೂ ಅವರ ಜೊತೆ ನಟಿಸುವುದಿಲ್ಲ ಎಂದಿದ್ದಾರೆ.