ಪ್ರಜ್ವಲ್ ರೇವಣ್ಣ ನೂರಾರು ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ, ತನ್ನ ತಾಯಿ ವಯಸ್ಸಿನವರನ್ನು ಬಲವಂತವಾಗಿ ಅತ್ಯಾಚಾರ ಮಾಡಿರುವ ವಿಡಿಯೋಗಳು ಹೊರಬಿದ್ದಿವೆ. ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಆತ ಜರ್ಮನಿಗೆ ಪಲಾಯನ ಮಾಡಿದ್ದಾನೆ. ರೇವಣ್ಣನವರ ಮೇಲೂ ಎಫ್ಐಆರ್ ಆಗಿದೆ. ಆದರೆ ಪ್ರಜ್ವಲನ ಕರ್ಮಕಾಂಡಗಳು ಗೊತ್ತಿದ್ದರೂ ದೇವೇಗೌಡರ ಕುಟುಂಬ ಆತನನ್ನೆ ಬೆಂಬಲಿಸಿದ್ದು ಏಕೆ ಎಂಬುದು ಚರ್ಚೆಯ ವಿಷಯವಾಗಿದೆ.
ಪ್ರಜ್ವಲ್ ರೇವಣ್ಣ ತನ್ನ ಸಂಸದನ ಅಧಿಕಾರ, ತನ್ನ ಕುಟುಂಬದ ಅಧಿಕಾರ ಮತ್ತು ಜಾತಿ ಅಧಿಕಾರ ದುರುಪಯೋಗಪಡಿಸಿಕೊಂಡು ಹಿಂಸಾತ್ಮಕವಾಗಿ ಲೈಂಗಿಕ ದೌರ್ಜನ್ಯವೆಸಗಿ ಅದನ್ನು ತನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಆ ಮೂಲಕ ಸಂತ್ರಸ್ತರನ್ನು ಬ್ಲಾಕ್ ಮೇಲ್ ಮಾಡಿ ಪದೇ ಪದೇ ದೌರ್ಜನ್ಯವೆಸಗಿದ್ದಾನೆ. ಆತನಿಗೂ ಮತ್ತು ಆತನ ಕಾರು ಡ್ರೈವರ್ ಆಗಿದ್ದ ಸ್ನೇಹಿತನಿಗೂ ಬೇನಾಮಿ ಜಮೀನಿನ ವಿಚಾರಕ್ಕೆ ಗಲಾಟೆ ನಡೆದಿದೆ. ನಂತರ ಪ್ರಜ್ವಲ್ ಡ್ರಗ್ಸ್ ನಶೆಯಲ್ಲಿದ್ದಾಗ ಆತನ ಸ್ನೇಹಿತ ಈ ವಿಡಿಯೋಗಳನ್ನು ತನ್ನ ಮೊಬೈಲ್ಗೆ ಕಳಿಸಿಕೊಂಡು ಹಾಸನದ ಬಿಜೆಪಿ ನಾಯಕರಿಗೆ ನೀಡಿದ್ದಾನೆ. ಆಗಲೇ ಅಂದರೆ ಒಂದು ವರ್ಷದ ಹಿಂದೆಯೇ ಪ್ರಜ್ವಲ್ ರೇವಣ್ಣ ಕೋರ್ಟ್ಗೆ ಹೋಗಿ ತನ್ನ ವಿಡಿಯೋ ಪ್ರದರ್ಶಿಸದಂತೆ ಇಂಜೆಕ್ಷನ್ ತಂದಿದ್ದಾನೆ. ಅಂದರೆ ಅವರ ಕುಟುಂಬಕ್ಕೆ ಈ ಕರ್ಮಕಾಂಡ ತಿಳಿದಿದೆ.
ಜನವರಿ ತಿಂಗಳಿನಲ್ಲಿಯೇ ದೇವರಾಜೇಗೌಡ ಎಂಬ ಬಿಜೆಪಿ ಮುಖಂಡ ಪತ್ರಿಕಾಗೋಷ್ಟಿ ನಡೆಸಿ ತನ್ನ ಬಳಿ ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಇದೆ ಎಂದು ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಡಿ ಎಂದಿದ್ದಾರೆ. ಆದರೂ ಬಿಜೆಪಿ ಮೈತ್ರಿ ಮುಂದುವರೆಸಿದೆ. ಸಂದರ್ಶನವೊಂದರಲ್ಲಿ ಕುಮಾರಸ್ವಾಮಿ “ಹಾಸನದ ಟಿಕೆಟ್ ಪ್ರಜ್ವಲ್ ಗೆ ನೀಡಬೇಡಿ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ತಂದೆ ಆತನನ್ನೇ ಮುಂದುವರೆಸಲು ನಿರ್ಧಾರ ಮಾಡಿದ್ದಾರೆ” ಎಂದು ಹೇಳಿದ್ದಾರೆ. ಅಂದರೆ ಇಡೀ ಲೈಂಗಿಕ ಹಗರಣ ಇಡೀ ಕುಟುಂಬಕ್ಕೆ ಮತ್ತು ಬಿಜೆಪಿಗೆ ತಿಳಿದಿದೆ. ಆದರೂ ಆತನಿಗೆ ಹಾಸನ ಟಿಕೆಟ್ ನೀಡಿದ್ದೇಕೆ?
ಇನ್ನು ಮೋದಿಯವರು ನೇಹಾ ಕೊಲೆಗಾರರಿಗೆ ಶಿಕ್ಷೆಯಾಗಬೇಕು ಎಂದು ಕರ್ನಾಟಕದಲ್ಲಿ ಗುಡುಗಿದ್ದಾರೆ. ಅದು ಸರಿ. ಆದರೆ ತಮ್ಮ ಮಿತ್ರ ಪಕ್ಷದ ವ್ಯಕ್ತಿ ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಅದರ ಬಗ್ಗೆ ಚಕಾರವೆತ್ತುವುದಿಲ್ಲ ಏಕೆ?
ಏಕೆಂದರೆ ಬಿಜೆಪಿ ಮತ್ತು ಜೆಡಿಎಸ್ಗೆ ಮಹಿಳೆಯರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಮಹಿಳೆಯರು ಇರುವುದೇ ಗಂಡಸರ ಸೇವೆ ಮಾಡಲು ಎಂಬ ನೀಚ ಮನಸ್ಥಿತಿ ಅವರದು. ತಮ್ಮ ಅಧಿಕಾರ ಬಳಸಿ ಮುಚ್ಚಿಹಾಕಬಹುದು ಎಂಬ ಅಹಂಕಾರದಿಂದ ಅವನಿಗೆ ಟಿಕೆಟ್ ಕೊಟ್ಟಿದ್ದಾರೆ. ಒಂದು ವೇಳೆ ಆತ ಗೆದ್ದುಬಿಟ್ಟರೆ ಈ ದೇಶದ ಪರಿಸ್ಥಿತಿಯೇನು ಯೋಚಿಸಿ. ಇಂತಹ ವಿಕೃತ ಕಾಮಿಗಳ ಪಕ್ಷವನ್ನು ಜನರು ತಿರಸ್ಕರಿಸಬೇಕಿದೆ. ಪ್ರಜ್ವಲ್ ರೇವಣ್ಣನನ್ನು ಆತನ ತಂದೆಯನ್ನು ಕೂಡಲೇ ಬಂಧಿಸಿ ಕಾನೂನು ಪ್ರಕಾರ ಶಿಕ್ಷೆ ನೀಡಬೇಕಿದೆ. ಇಂತಹ ಘಟನೆಗಳು ಸಮಾಜದಲ್ಲಿ ಮರುಕಳಿಸದಂತೆ ದೊಡ್ಡ ಪಾಠವಾಗಬೇಕಿದೆ.