ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ಜೊತೆಗೆ ಗ್ರಾಮಗಳ ಅಭಿವೃದ್ಧಿ ಹಾಗೂ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಚೆಸ್ಕಾಂ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಎ.ಬಿ. ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ಮಂಡ್ಯ ತಾಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ, ಕಾರಸವಾಡಿ,ಯತ್ತಗದಹಳ್ಳಿ, ಮರಕಾಡುದೊಡ್ಡಿ ಗ್ರಾಮಗಳಲ್ಲಿ ಸುಮಾರು 4 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನೀರಾವರಿ ಇಲಾಖೆ ವತಿಯಿಂದ ಕೊತ್ತತ್ತಿ ದೊಡ್ಡಕೆರೆ ಕೆರೆ ಅಭಿವೃದ್ಧಿ ಕಾಮಗಾರಿಗೆ 71 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ, ಬೇವಿನಹಳ್ಳಿ ಸಮೀಪ ಕಾರಸವಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ್ ಮಿಷನ್ ಅಡಿಯಲ್ಲಿ ಯತ್ತಗದಹಳ್ಳಿ 1ಕೋಟಿ 81ಲಕ್ಷ ರೂ. ಹಾಗೂ ಮರಕಾಡುದೊಡ್ಡಿ ಗ್ರಾಮದಲ್ಲಿ ಟ್ಯಾಂಕ್ ಮತ್ತು ಕುಡಿಯುವ ನೀರಿನ ಪೈಪ್ ಲೈನ್ ಅಭಿವೃದ್ಧಿ ಕಾಮಗಾರಿಗೆ 1ಕೋಟಿ 80 ರೂ.ವೆಚ್ಚದಲ್ಲಿ ಚಾಲನೆ ನೀಡಲಾಗಿದ್ದು, ಜನರ ಸಮಸ್ಯೆಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ 200 ಕೋಟಿ ರೂ. ವೆಚ್ಚದಲಿ ರಸ್ತೆ, ಕಾಲುವೆಗಳ ಅಭಿವೃದ್ಧಿ ಕಾಮಗಾರಿ,ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಿನ ಒಂದು ವಾರದೊಳಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇಂಜಿನಿಯರ್ ನಂಜುಂಡೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು, ಕೊತ್ತತ್ತಿ ನೀರು ಬಳಕೆದಾರ ಸಂಘದ ಅಧ್ಯಕ್ಷ ಕೆ.ಎಸ್.ರವಿ, ನಂಜುಂಡಸ್ವಾಮಿ, ಭಾಸ್ಕರ್, ಕೊತ್ತತ್ತಿರಾಜು,ಬೋರೇಗೌಡ, ಯತ್ತಗದಹಳ್ಳಿ ಹೊಂಬೇಗೌಡ, ಬೇಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸುವರ್ಣಾವತಿ, ಸದಸ್ಯ ಆನಂದ್, ಶಶಿಕಲಾ, ಮಂಜು, ಇತರರು ಹಾಜರಿದ್ದರು.