ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಹಾತೊರೆಯುತ್ತಿರುವ ಕಾಂಗ್ರೆಸ್ ಪಕ್ಷ ಬಿಜೆಪಿ ಪಕ್ಷದ ವಿರುದ್ಧ ಮುಗಿಬಿದ್ದಿದೆ. ಬಿಜೆಪಿ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳು ರಾಜ್ಯದ ಜನರ ಕಿವಿಗೆ ಹೂವ ಇಡುವಂತಿದೆ ಎನ್ನುವ ಮೂಲಕ ವಿಶಿಷ್ಟ ಪ್ರಚಾರದ ಮೊರೆ ಹೋಗಿದೆ.
ಮಂಡ್ಯದಲ್ಲಿ ಬಿಜೆಪಿ ಪಕ್ಷ ಗೋಡೆಗಳ ಮೇಲೆ ತನ್ನ ಸರ್ಕಾರದ ಸಾಧನೆಗಳ ಬಿಂಬಿಸುವ ಪೋಸ್ಟರ್ ಗಳನ್ನು ಹಾಕಿದೆ.ಈ ಪೋಸ್ಟರ್ ಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ‘ಕಿವಿಯ ಮೇಲೆ ಹೂವ’ ಎಂಬ ಪೋಸ್ಟರ್ ಹಚ್ಚಿ ಬಿಜೆಪಿಗೆ ಮುಜುಗರ ಉಂಟು ಮಾಡುವ ಜೊತೆಗೆ ಮಂಡ್ಯ ಜನರ ಗಮನ ಸೆಳೆಯಲು ಹೊರಟಿದ್ದಾರೆ.
ಬಿಜೆಪಿ ವಿರುದ್ಧ ‘ಪೋಸ್ಟರ್ ವಾರ್’
ಆಡಳಿತಾರೂಢ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸದ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೋರಿಸಲು ಕಾಂಗ್ರೆಸ್ ಶಾಸಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಣೆ ವೇಳೆ ವಿಧಾನಸಭೆಗೂ ಕಿವಿಯ ಮೇಲೆ ಚೆಂಡು ಹೂ ಇಟ್ಟುಕೊಂಡು ಬಂದಿದ್ದರು. ಅದನ್ನೇ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ತನ್ನ ಕಾರ್ಯಕರ್ತರ ಮೂಲಕ ಜನರನ್ನು ಬಿಜೆಪಿ ವಿರುದ್ಧ ತಿರುಗಿ ಬೀಳುವಂತೆ ಮಾಡಲು ಬೀದಿಗಿಳಿದು ‘ಕಿವಿ ಮೇಲೆ ಹೂವ’ ಅಭಿಯಾನವನ್ನು ಮಾಡಿದ್ದಾರೆ.
ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆ ಸೇರಿದಂತೆ ಹಲವೆಡೆ ಹಾಕಿರುವ ‘ಬಿಜೆಪಿಯೇ ಭರವಸೆ’ ಎಂಬ ಪೋಸ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ,ಜೆ.ಪಿ.ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ,ಯಡಿಯೂರಪ್ಪ ,ನಳೀನ್ ಕುಮಾರ್ ಕಟೀಲ್ ಅವರಿರುವ ಪೋಸ್ಟರ್ ಗಳ ಮೇಲೆ `ಸಾಕಪ್ಪ ಸಾಕು ಕಿವಿ ಮೇಲೆ ಹೂವ, ಬುರುಡೆ ಭರವಸೆ ಸಾಕು’ ಎಂಬ ಪೋಸ್ಟರ್ಗಳನ್ನು ಅಂಟಿಸಿ ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿದ್ದಾರೆ.
ಈ ಹಿಂದೆಯೂ ಕಾಂಗ್ರೆಸ್ ಪಕ್ಷ ‘ಪೇ ಸಿಎಂ’ ಎಂಬ ಅಭಿಯಾನದ ಮೂಲಕ ಬಿಜೆಪಿ 40% ಕಮೀಷನ್ ಹೊಡೆಯುತ್ತಿದೆ ಎಂಬುದನ್ನು ರಾಜ್ಯಾದ್ಯಂತ ಪೋಸ್ಟರ್ ಅಂಟಿಸಿ ಜನರ ಗಮನ ಸೆಳೆದಿತ್ತು.