”ಕಳೆದ ಲೋಕಸಭೆ ಸಭೆ ಚುನಾವಣೆಯಲ್ಲಿ ಸೋತೆ ಎಂದು ನಾನು ಮಂಡ್ಯವನ್ನ ಮರೆತ್ತಿಲ್ಲ, ಮುಂದಕ್ಕೂ ಮರೆಯೊಲ್ಲ, ನನಗೆ ಉಪ್ಸಾರು ಮುದ್ದೆ ಊಟ ಹಾಕಿ, ಪ್ರೀತಿಯ ಸ್ಥಾನ ಕೊಟ್ಟಿದ್ದೀರಿ, ನಿಮಗೆ ನಾನೆಂದೂ ಚಿರಋಣಿಯಾಗಿರುತ್ತೇನೆ” ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಂಚರತ್ನಯಾತ್ರೆಯ ಅಂಗವಾಗಿ ಮಂಡ್ಯನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಗುರುವಾರ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ರೈತಸಂಘದ ಷಡ್ಯಂತ್ರದಿಂದ ನಾನು ಸೋತಿದ್ದೇನೆ, ಆದರೆ ಜನರಿಂದ ದೂರವಾಗಿಲ್ಲ, ಈ ಹಿಂದೆ ಐದೂಕಾಲು ಲಕ್ಷ ಮತಗಳನ್ನು ಪಡೆದು ಸಿ.ಎಸ್.ಪುಟ್ಟರಾಜು ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ ನಾನು ಐದೂಮುಕ್ಕಾಲು ಲಕ್ಷ ಮತಗಳನ್ನು ಪಡೆದು ಸೋಲಬೇಕಾಯಿತು ಎಂದು ಹೇಳಿಕೊಂಡರು.
ನಾನು ಸೋತಿರಬಹುದು, ಆದರೆ ಮಂಡ್ಯ ಜನರೊಂದಿಗಿನ ಕಷ್ಟ ಸುಖದಲ್ಲಿ ಸದಾ ಭಾಗಿಯಾಗಿರುತ್ತೇನೆ. ಇತ್ತೀಚೆಗೆ ಅನಿತಾ ಕುಮಾರಸ್ವಾಮಿ ಅವರು ನನಗೆ ರಾಮನಗರ ಟಿಕೆಟ್ ಪ್ರಕಟಿಸಿದ ಸಂದರ್ಭದಲ್ಲಿ, ಮಂಡ್ಯ ಜಿಲ್ಲೆಯ ಅನೇಕ ಕಾರ್ಯಕರ್ತರು ಕರೆ ಮಾಡಿ, ”ನೀವು ಮಂಡ್ಯವನ್ನು ಬಿಟ್ಟು ಹೋಗಬೇಡಿ” ಎಂದು ಕೇಳಿಕೊಂಡರು, ಈಗ ಹೇಳುತ್ತೇನೆ, ನಾನು ಮಂಡ್ಯವನ್ನು ಎಂದಿಗೂ ಮರೆಯುವುದಿಲ್ಲ. ನೀವು ಉಪ್ಸಾರು ಮುದ್ದೆ ಹಾಕಿ ಪ್ರೀತಿ ಕೊಟ್ಟಿದ್ದೀರಲ್ಲ, ಅದೇ ನನ್ನ ಗೆಲುವು ಎಂದು ನುಡಿದರು.