ಸರ್ಕಾರದ ಕೆಲ ನಿಯಮಗಳಿಂದಾಗಿ ಮರಗಳನ್ನು ಕಟಾವು ಮಾಡಲು ಪರವಾನಗಿ ಪಡೆಯಲು ಸಾಧ್ಯವಾಗುತ್ತಿಲ್ಲ, ಈ ನಿಟ್ಟಿನಲ್ಲಿ ಸಂಘಟಿತ ಹೋರಾಟ ಮಾಡಿ ಸಾಮಿಲ್ಗಳನ್ನು ಮುಕ್ತವಾಗಿ ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದು ಮಂಡ್ಯ ಜಿಲ್ಲಾ ಮರದ ವ್ಯಾಪಾರಿಗಳು ಮತ್ತು ಸಾಮಿಲ್ ಮಾಲೀಕರ ಸಂಘದ ಅಧ್ಯಕ್ಷ ಲಿಂಗೇಗೌಡ ಪಾಪಣ್ಣ ಹೇಳಿದರು.
ಮಂಡ್ಯ ನಗರದ ಗುರುರಾಜ ಹೊಟೇಲ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮರದ ವ್ಯಾಪಾರಿಗಳು ಮತ್ತು ಸಾಮಿಲ್ ಮಾಲೀಕರ ಸಂಘದ 39ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹಲವಾರು ಸಾಮಿಲ್ಗಳು ಇವೆ, ರೈತರು ಬೆಳೆದಿರುವ ಮರಗಳನ್ನು ಕಟಾವು ಮಾಡಲು ಅರಣ್ಯ ಇಲಾಖೆಯವರ ಅನುಮತಿ ಅಗತ್ಯವಿದೆ, ಇದರಿಂದ ರೈತರು ಮತ್ತು ಸಾಮಿಲ್ ಮಾರಾಟಗಾರರಿಗೆ ತೀವ್ರ ಹಿನ್ನೆಡೆಯಾಗುತ್ತಿದೆ. ಇಂತಹ ಹಲವಾರು ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಘವು ಹೋರಾಟ ಮಾಡಬೇಕಾಗಿದ್ದು, ಎಲ್ಲ ಸದಸ್ಯರು ಸಂಘದ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ನೀಡಬೇಕೆಂದರು.
ಸಂಘದ ಉಪಾಧ್ಯಕ್ಷ ಜಿ.ಡಿ. ಸದಾಶಿವ, ಕಾರ್ಯದರ್ಶಿ ಎಚ್.ಜಿ. ರಾಮಚಂದ್ರ, ಸಹ ಕಾರ್ಯದರ್ಶಿ ಜಯಂತಿ ಲಾಲ್ ಎಂ.ಪಟೇಲ್, ಖಜಾಂಚಿ ಗೋವಿಂದ ಎಂ.ಪಟೇಲ್, ನಿರ್ದೇಶಕರಾದ ಕೆ.ಎಸ್. ರಾಮೇಗೌಡ, ಮರಿಸ್ವಾಮಿ, ನಟೇಶ, ಸ್ವಾಮಿ, ಲಕ್ಷ್ಮಿ ನಾರಾಯಣ, ಮಾಧು ಪಟೇಲ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.