ಬರದ ನಡುವೆಯೂ ಕೂಡ ನಾಡಿನ ಜನತೆ ಹಸಿವಿನಿಂದ ಇರದಂತೆ ನೆಮ್ಮದಿಯಿಂದ ಸಂಸಾರ ನಡೆಸಲು ಕಾಂಗ್ರೆಸ್ ಸರ್ಕಾರ ಚುನಾವಣೆ ಅವಧಿಯಲ್ಲಿ ಕೊಟ್ಟ 5 ಗ್ಯಾರಂಟಿಗಳನ್ನು ಜಾರಿಗೆ ತಂದು ಜನಪರ ಸರ್ಕಾರ ಎಂದು ತೋರಿಸಿಕೊಟ್ಟಿದೆ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಹೇಳಿದರು.
ಮಳವಳ್ಳಿ ತಾಲ್ಲೂಕಿನ ಶಿವನಸಮದ್ರದ ಗಗನಚುಕ್ಕಿ ಜಲಪಾತದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ 2.5 ಕೋಟಿ ರೂ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡರೇ ಪ್ರಧಾನಿ ಮೋದಿಯವರಿಗೆ ಭಯ ಶುರುವಾಗುತ್ತದೆ. ಅದಕ್ಕಿಂತ ಹೆಮ್ಮೆ ಇನ್ನೇನು ಬೇಕು, ಸಿದ್ದರಾಮಯ್ಯ ಅವರ ಬಗ್ಗೆ ಪ್ರಧಾನಿ ನರೇಂದ್ರಮೋದಿ ಎಲ್ಲಾ ರಾಜ್ಯದಲ್ಲಿಯೂ ಮಾತನಾಡುತ್ತಾರೆ ಎಂದರೇ ಸಿದ್ದರಾಮಯ್ಯ ಅವರ ಶಕ್ತಿ ಏನೆಂದು ತಿಳಿಯುತ್ತದೆ ಎಂದರು.
ಜನಸೇವೆ ಮಾಡಲು ಬಂದಿದ್ದೇವೆ, ಕಾಂಗ್ರೆಸ್ ಪಕ್ಷದಿಂದ ಜನಸೇವೆಯನ್ನು ಆರಂಭಿಸಿದ್ದೇವೆ, ವಿರೋಧ ಪಕ್ಷದಲ್ಲಿರುವವರು ಸರ್ಕಾರದ ತಪ್ಪುಗಳಲ್ಲಿ ಹೇಳಿದರೇ ಸ್ವಾಗತಿಸುತ್ತೇವೆಂದ ಅವರು, ವಿರೋಧ ಪಕ್ಷಗಳ ಅಧಿಕಾರಾವಧಿಯಲ್ಲಿ ನಡೆದಿರುವ ಭೂ ಹಗರಣಗಳ ಬಗ್ಗೆ ತನಿಖೆಗೆ ಒತ್ತಾಯಿಸಲಿ, ಮುಜರಾಯಿ ಇಲಾಖೆಗೆ ಸೇರಿದ ಆಸ್ತಿಯನ್ನು ಪುರಸಭೆಯಲ್ಲಿ ಟ್ರಸ್ಟ್ ಹೆಸರಿಗೆ ವರ್ಗಾಯಿಸಿದ್ದರು. ನಿಮ್ಮ ಮನೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ, ಬೇರೆ ಮನೆಯಲ್ಲಿ ನೋಣ ಸತ್ತು ಬಿದ್ದಿದೆ ಎಂದು ಏಕೆ ಕಿರುಚಾಡುತ್ತೀರಿ, ಜನಗಳನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಹದೇವಮ್ಮ, ತಾ.ಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ರಘೂ, ಮುಖಂಡರಾದ ಮಹದೇವು, ಮಂಜುಳ, ಶಿವಮಾದೇಗೌಡ, ಬಂಕ್ಮಹದೇವು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿಶ್ವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ಗ್ರಾ,ಪಂ ಮಾಜಿ ಅಧ್ಯಕ್ಷ ಸಿ.ಪಿ ರಾಜು, ಬಾಚನಹಳ್ಳಿ ರವೀಂದ್ರ, ಮಹೇಶ್ ಸೇರಿದಂತೆ ಇತರರು ಇದ್ದರು.