ಬರ ಪರಿಹಾರದ ಹಣ ಹಾಗೂ ಸಾಲ ಮನ್ನಾ ಆಸೆಗಾಗಿ ರೈತರು ಬರಗಾಲ ಬರಲಿ ಎಂದು ಕಾಯ್ತಾರೆ ಎಂದೇಳುವ ಮೂಲಕ ರೈತ ಸಮುದಾಯವನ್ನು ಅವಮಾನಿಸಿರುವ ಸಚಿವ ಶಿವಾನಂದ ಪಾಟೀಲ್ ವಿರುದ್ಧ ರೈತರು ಮಂಡ್ಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತಸಂಘದ ಆಶ್ರಯದಲ್ಲಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರೈತರು ಅವಿವೇಕಿ.ಅಯೋಗ್ಯ ಸಚಿವನಿಗೆ ನೇತೃತ್ವದಲ್ಲಿ ಶಿವಾನಂದ ಪಾಟೀಲ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ, ಕಾಲಿನಲ್ಲಿ ತುಳಿದು ಆಕ್ರೋಶ ವ್ಯಕ್ತಪಡಿಸಿ, ಭಾವಚಿತ್ರಕ್ಕೆ ಬೆಂಕಿ ಹಚ್ಚಿದರು.
ಸಚಿವ ಆತ್ಮಹತ್ಯೆ ಮಾಡಿಕೊಳ್ಳಲಿ
ರೈತರ ಮನೆ ಮನೆಗೆ ತೆರಳಿ ಹಸಿರು ಟವಲ್ ಯೊಡ್ಡಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಒಂದು ಕೋಟಿ ರೂ ನೀಡುತ್ತೇವೆ, ಸಚಿವ ಶಿವಾನಂದ ಪಾಟೀಲ್ ಸಾರ್ವತ್ರಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಪ್ರತಿಭಟನಾ ನಿರತ ರೈತರು ಆಕ್ರೋಶ ಹೊರಹಾಕಿದರು.
ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಿವಾನಂದ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಪರಿಹಾರ ಸಿಗಲಿದೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದ ಇವರು, ಇದೀಗ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ, ರೈತರನ್ನ ಅವಮಾನಿಸುವುದನ್ನು ಕಾಯಕ ಮಾಡಿಕೊಂಡಿರುವ ಪಾಟೀಲ್ ಸಚಿವ ಸ್ಥಾನದಲ್ಲಿ ಮುಂದುವರೆಯಲು ನಾಲಾಯಕ್ ಆಗಿದ್ದು, ಸಂಪುಟದಿಂದ ಕೈ ಬಿಡದಿದ್ದರೆ ಹೋರಾಟ ತೀವ್ರಗೊಳಿಸುವುದರ ಜೊತೆಗೆ ಮುಂಬರುವ ಜಿಪಂ, ತಾಪಂ ಹಾಗೂ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರೈತರು ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ ಒಂದೂವರೆ ರೂಪಾಯಿ ಕಡಿತ ಮಾಡುವ ಮೂಲಕ ಸರ್ಕಾರ ರೈತರಿಗೆ ದ್ರೋಹ ಮಾಡಿದೆ, ಅದೇ ರೀತಿ ಪಶು ಆಹಾರ ಬೆಲೆಯನ್ನು 50 ರೂ ಹೆಚ್ಚಳ ಮಾಡಿದೆ, ಈ ತಕ್ಷಣ ಹಾಲು ದರ ಕಡಿತ ಹಾಗೂ ಪಶು ಆಹಾರ ಬೆಲೆ ಹೆಚ್ಚಳ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ರೈತಸಂಘದ ಮಂಡ್ಯ ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರಶೇಖರ್, ಮಲ್ಲಿಗೆರೆ ಅಣ್ಣಯ್ಯ, ಮಲ್ಲನಾಯಕನಕಟ್ಟೆ ವಿಜಯ್ ಕುಮಾರ್, ಜಗದೀಶ್, ಸೋಮಣ್ಣ ಕೀಲಾರ, ಇಂಡುವಾಳು ಸಿದ್ದೇಗೌಡ ನೇತೃತ್ವ ವಹಿಸಿದ್ದರು.