ಕಾಂಗ್ರೆಸ್ ಪಕ್ಷ ತನ್ನ ಗ್ಯಾರೆಂಟಿ ಕಾರ್ಯಕ್ರಮದಲ್ಲಿ ಘೋಷಿಸಿರುವಂತೆ ಯುವ ಪದವೀಧರ, ಡಿಪ್ಲೊಮಾ ನಿರುದ್ಯೋಗಿ ಯುವ ಜನರಿಗೆ ಮಾಸಾಶನವನ್ನು ಯಾವುದೇ ರೀತಿಯ ನಿಬಂಧನೆ ಇಲ್ಲದೇ, ಎಲ್ಲಾ ಪದವೀಧರರಿಗೆ ನೀಡಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾಧು ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಡಿಪ್ಲೊಮಾ, ಪದವೀಧರ ನಿರುದ್ಯೋಗಿಗಳಿಗೆ ಯುವನಿಧಿ ಕೊಡುವುದಾಗಿ ಹೇಳಿ 2022-23ನೇ ಸಾಲಿನಲ್ಲಿ ಪಾಸಾದವರಿಗೆ ಮಾತ್ರ 2 ವರ್ಷದವರೆಗೆ ಯೋಜನೆ ಜಾರಿ ಎಂದಿರುವುದು ಹಾಸ್ಯಾಸ್ಪದವಾಗಿದೆ ಕಿಡಿಕಾರಿದ ಅವರು, ಭರವಸೆ ನೀಡಿ ಸದ್ಯ ಯುವಜನರಿಗೆ ಕಾಂಗ್ರೆಸ್ ಅಡಳಿತ ಟೋಪಿ ಹಾಕುತ್ತಿದೆ. ಹಲವು ಭಾಗ್ಯಗಳನ್ನು ಘೋಷಣೆ ಮಾಡಿರುವ ಸರ್ಕಾರ ಮೊದಲು ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದರು.
ರಾಜ್ಯ ಸಮಿತಿ ಸಭೆ
ಜೂ.2ರಿಂದ ಎರಡು ದಿನಗಳ ಕಾಲ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ರಾಜ್ಯ ಸಮಿತಿ ಸಭೆ ಬೆಂಗಳೂರಿನಲ್ಲಿ ನಡೆಯಲಿದ್ದು, ಆಖಿಲ ಭಾರತ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ ಸಭೆಗೆ ಹಾಜರಾಗುವರು. ಸಭೆಯಲ್ಲಿ ಕೋಮುವಾದಿ ಬಿಜೆಪಿ ಸರ್ಕಾರ ತೊಲಗಿಸಲು ಸಂಘವು ನಡೆಸಿದ ಆಂದೋಲನದ ವಿಮರ್ಶೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಬಿ.ಹನುಮೇಶ್, ತಾಲ್ಲೂಕು ಅಧ್ಯಕ್ಷ ಅಮಾಸಯ್ಯ, ಉಪಾಧ್ಯಕ್ಷ ಅಬ್ದುಲ್ಲಾ, ಸಹ ಕಾರ್ಯದರ್ಶಿ ಸಂತೋಷ್ ಹಾಜರಿದ್ದರು.