ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ 59 ದಿನಗಳಿಂದ ನಡೆಯುತ್ತಿರುವ ರೈತಸಂಘದ ಹೋರಾಟದಲ್ಲಿ ರೈತನಾಯಕ ದರ್ಶನ್ ಪುಟ್ಟಣ್ಣಯ್ಯ ಭಾಗಿಯಾದರು.
ಕಬ್ಬಿನ ಬೆಲೆ ನಿಗದಿ, ಹಾಲಿನ ಬೆಲೆ ಹೆಚ್ಚಳ ಮತ್ತು ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ವಿದ್ಯುತ್ ಬಾಕಿ ಮನ್ನಾ ಮಾಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿದ ದರ್ಶನ್ ಪುಟ್ಟಣ್ಣಯ್ಯ ರೈತನಾಯಕರ ಜೊತೆ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು.
ಇಂದು ಐದು ರೂಪಾಯಿ ಡಾಕ್ಟರ್ ಎಂದೇ ಪ್ರಸಿದ್ಧರಾಗಿರುವ ಡಾ.ಶಂಕರೇಗೌಡ ಮತ್ತು ರೈತ ಸಂಘದ ಹಿರಿಯ ರೈತ ಹೋರಾಟಗಾರ ಹೆಚ್.ಎಸ್.ಶ್ರೀನಿವಾಸ್ ರವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.
ಅಲ್ಲದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ,ಜಿ.ಪಂ. ಸಿಇಓ ಶಾಂತಾ ಹುಲ್ಮನಿ ಅವರಿದ್ದ ಸಭೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಪ್ರಸನ್ನಗೌಡ ,ಲಿಂಗಪ್ಪಾಜಿ ಮೊದಲಾದವರೊಂದಿಗೆ ಭಾಗವಹಿಸಿದ್ದರು. ದರ್ಶನ್ ಪುಟ್ಟಣ್ಣಯ್ಯ ಅವರ ಈ ನಡೆ ರೈತಸಂಘದ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ.