ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರಕ್ತ ಸಹಿ ಪತ್ರ ಚಳವಳಿಯನ್ನು ಅತಿಥಿ ಶಿಕ್ಷಕರು ಮಳವಳ್ಳಿ ಪಟ್ಟಣದಲ್ಲಿ ರಕ್ತ ಪತ್ರ ಚಳವಳಿ ನಡೆಸಿದರು.
ಮಳವಳ್ಳಿ ಪಟ್ಟಣದ ಕನ್ನಡ ಭವನದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಅತಿಥಿ ಶಿಕ್ಷಕರು ಸಭೆಯಲ್ಲಿ ಮುಂದಿನ ತಿಂಗಳು ಫೆಬ್ರವರಿ 16 ರಂದು ನಡೆಯುವ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ರಕ್ತಪತ್ರ ಚಳವಳಿ ನಡೆಸಿದರು.
ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸುಮಾರು 42 ಸಾವಿರ ಅತಿಥಿ ಶಿಕ್ಷಕರು ಸುಮಾರು 10 ವರ್ಷಗಳಿಂದ ಕೇವಲ ಗೌರವಧನದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ, ಎಷ್ಟೋ ಶಾಲೆಗಳಲ್ಲಿ ಖಾಯಂ ಶಿಕ್ಷಕರು ಇಲ್ಲದೆ ಅತಿಥಿ ಶಿಕ್ಷಕರೇ ಎಲ್ಲಾ ಜವಬ್ದಾರಿ ಹೊತ್ತು ಉತ್ತಮ ಫಲಿತಾಂಶ ನೀಡಿರುವ ನೂರಾರು ಶಾಲೆಗಳಿವೆ, ಇಷ್ಟೆಲ್ಲ ದುಡಿದಿದ್ದರು ಸಹ ನಾವು ಸರ್ಕಾರಕ್ಕೆ ಹಲವಾರು ಬಾರಿ ಮನವಿ ನೀಡುತ್ತಾ ಬಂದಿದ್ದೇವೆ, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಕಿಡಿಕಾರಿದರು.
ಮುಂದಿನ ತಿಂಗಳು ಫೆಬ್ರುವರಿ 16 ರಂದು ನಡೆಯುವ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಗಮನಿಸಿ ರಾಜ್ಯದ ಸಮಸ್ತ ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ಮನವಿ ಮಾಡುತ್ತೇವೆ. ಸರ್ಕಾರ ಸುಪ್ರೀಂ ಕೋರ್ಟ್ ನ ಆದೇಶವನ್ನು ಪಾಲಿಸಬೇಕೆಂದು ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಸಲ್ಲಿಸುತ್ತಿದ್ದೇವೆ, ಎಲ್ಲಾ ಶಿಕ್ಷಕರು ತಮ್ಮ ರಕ್ತದಿಂದ ಸಹಿ ಮಾಡಿ ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸಿದರು.
ಇದೇ ಸಂಧರ್ಭದಲ್ಲಿ ಅತಿಥಿ ಶಿಕ್ಷಕರ ಸಂಘದ ಉಪಾಧ್ಯಕ್ಷ ಚುಂಚಣ್ಣ, ಪ್ರಧಾನ ಕಾರ್ಯದರ್ಶಿ ಕೆಂಪರಾಜು, ಖಜಾಂಚಿ ಪುಟ್ಟರಾಜು, ಮಹಿಳಾ ಘಟಕದ ಅಧ್ಯಕ್ಷೆ ಶಿವಮ್ಮ, ಸುಮಿತ್ರ, ಸಹ ಕಾರ್ಯದರ್ಶಿ ವಿಷಕಂಠ ಮೂರ್ತಿ, ರೇಖಾ, ರಾಧಾ, ರಮ್ಯಾ, ಹನುಮಂತಪ್ಪ, ಹನುಮಯ್ಯ, ಬಿಲ್ಲಯ್ಯ ಸ್ವಾಮಿ, ಮಹದೇವ ಸ್ವಾಮಿ ಮಹದೇವು ಇತರರು ಭಾಗವಹಿಸಿದ್ದರು.