ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ಧಾರಿಯೂ ಅತೀ ಹೆಚ್ಚು ಅಪಘಾತಗಳು ನಡೆಯುವ ಹೆದ್ದಾರಿ ಎಂದು ಕುಖ್ಯಾತಿ ಪಡೆದಿರುವ ಬೆನ್ನಲ್ಲೇ ಹೆದ್ದಾರಿ ದರೋಡೆಯಿಂದಲೂ ಈಗ ಸುದ್ದಿಯಲ್ಲಿದೆ.
ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ನಿನ್ನೆಯಷ್ಟೆ ಹೆದ್ದಾರಿಗೆ ಭೇಟಿ ಪರಿಶೀಲಿಸಿ ನಡೆಸಿ ಬೆನ್ನಲ್ಲೇ ಮಧ್ಯರಾತ್ರಿ ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ವ್ಯಕ್ತಿ ಬೆದರಿಸಿ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಮದ್ದೂರು ಪಟ್ಟಣದಲ್ಲಿ ಜರುಗಿದೆ.
ಮಡಿಕೇರಿಯ ಇಂಟೀರಿಯರ್ ಡಿಸೈನರ್ ಮುತ್ತಪ್ಪ ಅವರನ್ನು ಬೆದರಿಸಿದ ಮೂವರು ದುಷ್ಕರ್ಮಿಗಳು ಡ್ರ್ಯಾಗನ್ ತೋರಿಸಿ, 65 ಗ್ರಾಂ ನ ಚಿನ್ನದ ಸರ ಕಸಿದು ಕೊಂಡು ಪರಾರಿಯಾಗಿದ್ದಾರೆ.
ಮೆದುಳು ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ತೆರಳಿದ್ದ ಮುತ್ತಪ್ಪ ಮರಳಿ ಇನೋವಾ ಕಾರಿನಲ್ಲಿ (ಕೆಎ -12 ಎಂಬಿ 0763) ವಾಪಸ್ ಆಗುತ್ತಿದ್ದಾಗ ಮಧ್ಯರಾತ್ರಿ 2- 15 ರ ಸಮಯದಲ್ಲಿ ಮದ್ದೂರು ಪಟ್ಟಣದ ಐಶ್ವರ್ಯ ಕಾನ್ವೆಂಟ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಅಲ್ಲಿಗೆ ಬಂದ ಮೂವರು ಈ ಕೃತ್ಯವೆಸಗಿದ್ದಾರೆ.
ಕುತ್ತಿಗೆಯಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಸರ ಮತ್ತು ಅದರ ಜೊತೆಯಲ್ಲಿದ್ದ 15 ಗ್ರಾಂ ತೂಕದ ಚಿನ್ನದ ತಾಯಿತ ಕಸಿಯಲು ಯತ್ನಿಸಿದಾಗ ಮುತ್ತಪ್ಪ ಪ್ರತಿರೋಧ ತೋರಿದರು, ಆಗ ದುಷ್ಕರ್ಮಿಗಳು ಡ್ರಾಗನ್ ನಲ್ಲಿ ಮುಂಗೈ ಮತ್ತು ಕುತ್ತಿಗೆ ಬಳಿ ಗಾಯಗೊಳಿಸಿ ಆಭರಣ ದೋಚಿ ಪರಾರಿಯಾಗಿದ್ದಾರೆ.
ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಬಂದಾಗ ದರೋಡೆ ವಿಚಾರ ಬೆಳಕಿಗೆ ಬಂದಿದ್ದು, ಗಾಯಾಳುವನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮದ್ದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.