ಕನ್ನಡ ನಾಡು -ನುಡಿಯ ಏಳ್ಗೆಗಾಗಿ ಶ್ರಮಿಸುತ್ತಿರುವ ಶತಮಾನದ ಇತಿಹಾಸವಿರುವ ಕನ್ನಡದ ಪ್ರಾತಿನಿಧಿಕ ಸಂಸ್ಥೆ ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಜಿ. ಧನಂಜಯ ದರಸಗುಪ್ಪೆ ಅಭಿಪ್ರಾಯಪಟ್ಟರು.
ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾ ಭವನದಲ್ಲಿ ಆಯೋಜನೆ ಮಾಡಿದ್ದ, “ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ”ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶತಮಾನದ ಇತಿಹಾಸವುಳ್ಳ, ಸುಮಾರು 5 ಲಕ್ಷದಷ್ಟು ಸದಸ್ಯರನ್ನು ಹೊಂದಿರುವ, ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಘಟಕಗಳಲ್ಲದೇ, ಹೊರನಾಡು ಹಾಗೂ ಗಡಿನಾಡುಗಳಲ್ಲಿಯೂ ಘಟಕಗಳನ್ನು ಹೊಂದಿರುವ, ಭಾಷೆಯ ಏಳ್ಗೆಗಾಗಿ ಶ್ರಮಿಸುತ್ತಿರುವ ವಿಶ್ವದಲ್ಲಿಯೇ ಏಕೈಕ ಸಂಸ್ಥೆ “ಕನ್ನಡ ಸಾಹಿತ್ಯ ಪರಿಷತ್ತು”ಎಂದರೆ ಬಹುಶಃ ತಪ್ಪಾಗಲಾರದು ಎಂದರಲ್ಲದೇ, ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತಾಗಿ ರೂಪುಗೊಂಡಿದೆ ಎಂದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ 25ಮಂದಿ ಸೇವೆ ಸಲ್ಲಿಸಿ, ಡಾ. ನೋಡೋಜ ಮಹೇಶ ಜೋಷಿ ರವರು ಪ್ರಸ್ತುತ 26ನೇ ರಾಜ್ಯಾಧ್ಯಕ್ಷರಾಗಿದ್ದಾರೆ. ಇದುವರೆವಿಗೂ 86 ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿದ್ದು, 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಕಾರ್ಯಕ್ರಮವನ್ನು ಶ್ರೀರಂಗಪಟ್ಟಣ ಕ. ಸಾ. ಪ. ಮಾಜಿ ಅಧ್ಯಕ್ಷ ಅ. ಸೋಮಶೇಖರ್ ಅರಕೆರೆ ಉದ್ಘಾಟನೆ ಮಾಡಿದರು. ಶಿಕ್ಷಕ ಎ. ಆರ್. ಅನಿಲ್ ಬಾಬು ಅರಕೆರೆ ಮಾತನಾಡಿದರು. ಶ್ರೀರಂಗಪಟ್ಟಣ ತಾ. ಕ ಸಾ ಪ ಅಧ್ಯಕ್ಷ. ಬಿ. ಮಂಜುನಾಥ್ ಬಲ್ಲೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಮಂಡಳಿಯ ಸುಮಾ, ಗ್ರಾ. ಪಂ. ಸದಸ್ಯೆ ಮೀನಾ, ಶಿವಕುಮಾರ ಅರಕೆರೆ, ಕೊ. ನಾ. ಪುರುಷೋತ್ತಮ್, ಪಾಲಹಳ್ಳಿ ಶೇಖರ್, ಎನ್. ಸರಸ್ವತಿ ಮಾತನಾಡಿದರು. ಈ ಸಂದರ್ಭದಲ್ಲಿ ಪರಿಷತ್ತಿನ ಹಿರಿಯ ಸದಸ್ಯರಾದ ಕೆ. ಪುಟ್ಟಸ್ವಾಮಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಅರಕೆರೆ ಡೈರಿ ಅಧ್ಯಕ್ಷ ಪ್ರಕಾಶ್, ಶ್ರೀಧರ್, ದೀಪು, ಎಂ. ಜಗದೀಶ್ ಕುಮಾರ್, ಎ. ಪಿ ರವಿ, ಎಂ. ಬಿ.ಅನಂತಯ್ಯ, ಹರೀಶ್ ಬಳ್ಳೆಕೆರೆ,ಹಾಗೂ ಇತರರು ಉಪಸ್ಥಿತರಿದ್ದರು. ಅರಕೆರೆ ಹೋಬಳಿ ಘಟಕದ ಅಧ್ಯಕ್ಷ ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕ. ಸಾ. ಪ 110 ಎಂದು ನಮೂದಿಸಿರುವ ಕೇಕ್ ಕತ್ತರಿಸಿ ಸಂಭ್ರಮಿಸಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.