ಸರ್ವೋದಯ ಕರ್ನಾಟಕ ಪಕ್ಷದ ಚಾಲನಾ ಸಮಾರಂಭವು ಜ. 23ರ ಸೋಮವಾರದಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಮಹಾರಾಣಿ ಕಾಲೇಜು ಪಕ್ಕದ ಸೈಟ್ಸ್ ಅಂಡ್ ಗೈಡ್ಸ್ ಕೊಂಡಜ್ಜಿ ಬಸಪ್ಪ ಸಮುದಾಯ ಭವನದದಲ್ಲಿ ನಡೆಯಲಿದೆ.
ಸರ್ವೋದಯ ಕರ್ನಾಟಕ ಪ್ರಾದೇಶಿಕ ಪಕ್ಷವನ್ನು ಸಾಹಿತಿ ದೇವನೂರ ಮಹಾದೇವ, ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ, ಇಂದೂಧರ ಹೊನ್ನಾಪುರ ಹಾಗೂ ಸಮಾನ ಮನಸ್ಕರು, ರೈತ ಮತ್ತು ದಲಿತ ಸಂಘಟನೆಗಳ ಜೊತೆಗೂಡಿ ಜನಸಾಮಾನ್ಯರ ಆಶಯದ ಪಕ್ಷವಾಗಿ 2005ರಲ್ಲಿ ಹುಟ್ಟುಹಾಕಲಾಗಿತ್ತು.
ತದನಂತರ ರಾಷ್ಟ್ರೀಯ ಮಟ್ಟದಲ್ಲಿ ನಮ್ಮಂತೆಯೇ ಹೋರಾಟ ಮತ್ತು ರಾಜಕಾರಣವನ್ನು ಜೊತೆಗೂಡಿಸಿದ ಪಕ್ಷವಾದ ಸ್ವರಾಜ್ ಇಂಡಿಯಾ ಜೊತೆಗೆ 2017ರಲ್ಲಿ ವಿಲೀನಗೊಳಿಸಲಾಗಿತ್ತು. ಈಗ ಸ್ವರಾಜ್ ಇಂಡಿಯಾ ಪಕ್ಷವು 2024ರವರೆಗೂ ಚುನಾವಣೆಯಿಂದ ದೂರ ಇರಲು ತೀರ್ಮಾನಿಸಿರುವುದರಿಂದ ರಾಜ್ಯದಲ್ಲಿ ಸರ್ವೋದಯ ಕರ್ನಾಟಕ ಪಕ್ಷವನ್ನು ಚಾಲನೆ ಮಾಡಿ ಚುನಾವಣೆ ಎದುರಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಸರ್ವೋದಯ ಕರ್ನಾಟಕದ ಹಂಗಾಮಿ ರಾಜ್ಯ ಸಮಿತಿಯು ಪ್ರವಾಸ ಮಾಡಿ ರಾಜ್ಯದ 15ಕ್ಕಿಂತಲೂ ಹೆಚ್ಚು ಜಿಲ್ಲೆಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ಮುಖಂಡರು ನುಡಿಕರ್ನಾಟಕ.ಕಾಮ್ ಗೆ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಪಕ್ಷದ ಪದಾಧಿಕಾರಿಗಳು ಮತ್ತು ‘ಕರ್ನಾಟಕ ರಾಜ್ಯ ರೈತ ಸಂಘ’ದ ರಾಜ್ಯ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು, ಮಹಿಳಾ ಹಾಗೂ ಯುವ ವಿಭಾಗದ ಪದಾಧಿಕಾರಿಗಳು, ‘ದಲಿತ ಸಂಘರ್ಷ ಸಮಿತಿ’ ಮತ್ತು ‘ಪ್ರಗತಿಪರ ಸಂಘಟನೆ’ಗಳ ಪದಾಧಿಕಾರಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸುವಂತೆ ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ಪುನೀತ್ ಮೊ.9844557822 ಹಾಗೂ ವೀರಸಂಗಯ್ಯ ಮೊ.9342658829 ಸಂಪರ್ಕಿಸಬಹುದು.