ಕಳೆದ ಕೆಲವು ದಿನಗಳಿಂದ ಕರ್ನಾಟಕ ರಾಜ್ಯದಲ್ಲಿ ತಲ್ಲಣ ಉಂಟು ಮಾಡಿರುವ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯವು ವಿಕೃತ ಘಟನೆಯಾಗಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮಂಡ್ಯ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಹಕ್ಕು ಜವಾಬ್ದಾರಿ ಗೌರವವನ್ನು ಬೀದಿಪಾಲು ಮಾಡುವುದರ ಮೂಲಕ ತಾನೊಬ್ಬ ಮಹಿಳಾ ವಿರೋಧಿ ಎಂಬುದನ್ನು ಪ್ರಜ್ವಲ್ ತೋರ್ಪಡಿಸಿಕೊಟ್ಟಿದ್ದಾನೆ. ಈ ನೆಲದ ಕಾನೂನು ವ್ಯಾಪ್ತಿಯಲ್ಲಿ ಇದರ ಬಗ್ಗೆ ಸೂಕ್ತ ತನಿಖೆಯನ್ನು ಮಾಡಿ ಎಷ್ಟು ಸಾಧ್ಯವೋ ಅಷ್ಟು ಬೇಗ ನೊಂದ ಮಹಿಳೆಯರಿಗೆ ಸಮಾಜಕ್ಕೆ ಉತ್ತಮ ಸಂದೇಶ ಕೊಡುವನಿಟ್ಟಿನಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಕಾರ್ಯೊನ್ಮುಕವಾಗಿದೆ ಎಂದರು.
ಈಗಾಗಲೆ ಎಸ್ಐಟಿ ರಚನೆ ಮಾಡಿರುವುದನ್ನು ಅಭಿನಂದಿಸುತ್ತೇವೆ, ತುರ್ತಾಗಿ ಆ ವರದಿಯ ಆಧಾರದ ಮೇಲೆ ಇವನನ್ನು ಜೆಡಿಎಸ್ ಪಕ್ಷದಿಂದ ಶಾಶ್ವತವಾಗಿ ಉಚ್ಚಾಟಿಸಬೇಕು. ಈತ ಮಾಡಿರುವ ಎಲ್ಲಾ ಕೃತ್ಯಗಳನ್ನು ಹೊರಗೆಳೆಯಬೇಕು. ಈ ಮೂಲಕ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಮತ್ತು ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತೀವ್ರವಾದ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಇಂತಹ ನಡೆತೆಯುಳ್ಳವನನ್ನು ಹಾಸನದಿಂದ ಬಿಜೆಪಿಯು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದು ಅಕ್ಷಮ್ಯ ಅಪರಾಧವಾಗಿದೆ, ಆದ್ದರಿಂದ ಬಿಜೆಪಿಯವರು ಈ ಕೃತ್ಯಕ್ಕೆ ತಾವು ಕೂಡ ಪೂರ್ಣ ಜವಾಬ್ದಾರರಾಗಿದ್ದಾರೆ ಎಂದು ಕಿಡಿಕಾರಿದ ಅವರು, ಮುಂದಿನ 2 ಹಂತದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳಿಗೆ ತಕ್ಕಪಾಠ ಕಲಿಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ನಗರಸಭಾ ಸದಸ್ಯ ಹೀನಾ, ಮುಖಂಡರಾದ ಇಂದಿರಾ ಸತೀಶ್ ಬಾಬು, ಸುವರ್ಣವತಿ, ನೀಲಾ ಮೂರ್ತಿ, ಪದ್ಮ ಮೋಹನ್ ಉಪಸ್ಥಿತರಿದ್ದರು.