ನಾನು 1983ರಿಂದಲೂ ರಾಜಕೀಯದಲ್ಲಿ ಇದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಇಂಥಾ ಭಂಡ, ಭ್ರಷ್ಟ, ಸುಳ್ಳು ಹೇಳುವಂತಹ ಸರ್ಕಾರವನ್ನು ನೋಡಿಲ್ಲ. ಸುಳ್ಳು ಹೇಳುವುದನ್ನ ಕರಗತ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ, ನಳೀನ್ ಕುಮಾರ್ ಕಟೀಲ್, ಜೆಪಿ ನಡ್ಡಾ ಎಲ್ಲಾ ಸುಳ್ಳು ಹೇಳುವವರೇ, ಅದಕ್ಕಿಂತ ದೊಡ್ಡ ಸುಳ್ಳ ಬಸವರಾಜ್ ಬೊಮ್ಮಾಯಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಬೆಂಗಳೂರಿನಲ್ಲಿ ಕೆಪಿಸಿಸಿ ವತಿಯಿಂದ ನಡೆದ ಮುಖ್ಯಮಂತ್ರಿ ಬೊಮ್ಮಾಯಿ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿರುವುದು ಬಿಜೆಪಿ ಭ್ರಷ್ಟಾಚಾರದ ಸರ್ಕಾರ. ಇಷ್ಟೊಂದು ಭ್ರಷ್ಟಾಚಾರ ಮಾಡಿರುವ ಸರ್ಕಾರ ಯಾವಾಗಲೂ ಬಂದಿಲ್ಲ. ನಾವು ಈ ಸರ್ಕಾರದಲ್ಲಿ ಭ್ರಷ್ಟಾಚಾರದ ವಿಚಾರದಲ್ಲಿ ಹೋರಾಟ ಮಾಡಿದ್ದೇವೆ. ಯಾವಾಗಲೂ ದಾಖಲೆ ಕೊಡಿ ಅಂತ ಬೊಮ್ಮಾಯಿ ಹೇಳ್ತಿದ್ದರು. ಹಿಂದಿನ ಸರ್ಕಾರ ಭ್ರಷ್ಟಾಚಾರ ಮಾಡಿಲ್ವಾ ಅಂತಾ ಹೇಳ್ತಿದ್ದರು. ಈಗ ಎಲ್ಲದಕ್ಕೂ ಸಾಕ್ಷಿ ಸಿಕ್ಕಿದೆ ಎಂದು ಸಿದ್ಧರಾಮಯ್ಯ ತಿರುಗೇಟು ನೀಡಿದರು.
ಸುಮ್ಮನೆ ಅರೆಸ್ಟ್ ಆದ್ರಾ..?
ಪಿಎಸ್ಐ ಹಗರಣದಲ್ಲಿ ಐಪಿಎಸ್ ಅರೆಸ್ಟ್ ಆದರು. ಸುಮ್ಮನೆ ಅರೆಸ್ಟ್ ಆದ್ರಾ..? ಭ್ರಷ್ಟಾಚಾರ ಮಾಡಿಲ್ವಾ? ಇದಕ್ಕಿಂತ ದಾಖಲೆ ಬೇಕಾ ? ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ. ಆತ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಪಾಪ..ಕೆಲಸ ಮಾಡಿದರೂ ಅವರಿಗೆ ಬಿಲ್ ಸಿಗಲಿಲ್ಲ. ಯಾಕಂದ್ರೆ ಈಶ್ವರಪ್ಪ 40% ಕಮಿಷನ್ ಕೇಳಿದ. ಅವನ ಕೈಯಲ್ಲಿ ಕೊಡೋದಕ್ಕೆ ಆಗಲಿಲ್ಲ. ನಾವು ಅವರ ಮನೆಗೆ ಹೋಗಿದ್ದೆವು. ಅವನ ಪತ್ನಿ ಹಾಗೂ ತಾಯಿ, ಸಂತೋಷ್ ಪಾಟೀಲ್ ಸಾವಿಗೆ ಈಶ್ವರಪ್ಪನೇ ನೇರ ಕಾರಣ ಎಂದಿದ್ದರು. ನಾವು ಅಹೋರಾತ್ರಿ ಧರಣಿ ಮಾಡಿದೆವು. ಈಶ್ವರಪ್ಪ ರಾಜೀನಾಮೆ ಕೊಟ್ಟ. ಸುಮ್ಸುಮ್ನೆ ಈಶ್ವರಪ್ಪ ರಾಜಿನಾಮೆ ಕೊಟ್ನಾ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
ನೇಮಕಾತಿ, ರ್ಗಾವಣೆಯಲ್ಲಿ ಲಂಚ . ಪ್ರೊಫೆಸರ್, ಶಿಕ್ಷಕರ ನೇಮಕದಲ್ಲೂ ಲಂಚ ತೆಗೆದುಕೊಂಡರು. ಜನಪರವಾದ ಸರ್ಕಾರ ಯಾವುದೇ ಆರೋಪ ಬಂದಾಗ, ಅದರಿಂದ ಮುಕ್ತವಾಗಬೇಕು. ಅದು ಸರ್ಕಾರದ ಕರ್ತವ್ಯ. ನಾನು 8 ಕೇಸ್ ಗಳನ್ನ ಸಿಬಿಐಗೆ ವಹಿಸಿದ್ದೆ. ಡಿಕೆ ರವಿ ಕೇಸ್ ನಲ್ಲಿ ಇವರು ದಾಖಲೆ ಕೊಟ್ಟಿದ್ದರೇ? ಗಣಪತಿ ಆತ್ಮಹತ್ಯೆ ಕೇಸಲ್ಲಿ ಕೆ.ಜೆ.ಜಾರ್ಜ್ ಪಾತ್ರ ಇಲ್ಲದೇ ಇದ್ರೂ ರಾಜಿನಾಮೆ ನೀಡಿದರು. ಸಿಂಗಲ್ ನಂಬರ್ ಲಾಟರಿ ಕೇಸಲ್ಲಿ ಕುಮಾರಸ್ವಾಮಿ, ದೇವೇಗೌಡರು ಆರೋಪ ಮಾಡಿದರು. ನಾನು ಸಿಬಿಐಗೆ ವಹಿಸಿದೆ, ಅದು ಬಿ ರಿಪೋರ್ಟ್ ಬಂತು. ಪರೇಶ್ ಮೇಸ್ತಾ ಕೊಲೆ ಅಂತ ಹೋರಾಟ ಮಾಡಿದರು. ನಾನು ಸಿಬಿಐಗೆ ವಹಿಸಿದೆ, ಬಿ ರಿಪೋರ್ಟ್ ಬಂತು. ಈ ಭಂಡ ಸರ್ಕಾರ ಖುರ್ಚಿಗೆ ಅಂಟಿಕೊಂಡು ಲೂಟಿ ಹೊಡಿತಿದೆ ಎಂದು ಕಿಡಿಕಾರಿದರು.
ಒಂದೊಂದು ಕ್ಷೇತ್ರಕ್ಕೆ 100 ಕೋಟಿ ಖರ್ಚು
ಈ ಸರ್ಕಾರದಲ್ಲಿ ಎಲ್ಲವೂ ನಿಗದಿ ಆಗಿದೆ. ಈ ಹುದ್ದೆಯಲ್ಲಿ ಇರುವವರು ಇಷ್ಟಿಷ್ಟು ಲೂಟಿ ಮಾಡಬೇಕು ಅಂತ. ಇವರು ದುಡ್ಡಿನಿಂದ ಈ ಸಾರಿ ಚುನಾವಣೆ ಗೆಲ್ಲಲು ರೆಡಿಯಾಗಿದ್ದಾರೆ. ಈ ಬಾರಿ 100 ಕೋಟಿ ಒಂದು ಕ್ಷೇತ್ರದಲ್ಲಿ ರ್ಚು ಮಾಡಲು ಹೊರಟಿದ್ದಾರೆ. ಜನರೇ ಇವರಿಗೆ ಪಾಠ ಕಲಿಸಬೇಕು ಬಸವರಾಜ್ ಬೊಮ್ಮಾಯಿ ಅವರಿಗೆ ನಿಮಗೆ ಕಿಂಚಿತ್ತು ಮಾನ ಮರ್ಯಾದೆ ಇದ್ದರೆ, ಮಾಡಾಳ್ ವಿರೂಪಾಕ್ಷಪ್ಪ ಅವರನ್ನ ಕೂಡಲೇ ಬಂಧಿಸಬೇಕು. ನೈತಿಕ ಹೊಣೆ ಹೊತ್ತು ಬೊಮ್ಮಾಯಿ ರಾಜೀನಾಮೆ ಕೊಡಬೇಕು ಎಂದು ಸಿದ್ಧರಾಮಯ್ಯ ವಾಗ್ದಾಳಿ ಮಾಡಿದರು.
ಎಂಟು ಕೋಟಿ ಹಣ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದಕ್ಕಿಂತ ದಾಖಲೆ ಬೇಕಾ ಅಮಿತ್ ಶಾ ಬಂದು ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯ ಸರ್ಕಾರ ಎಟಿಎಂ ಆಗಿತ್ತು ಅಂತ ಹೇಳ್ತಾರೆ. ಈಗ ಹೇಳಿ ಮಿಸ್ಟರ್ ಶಾ… ಇದೇನು? ಯಾವುದೇ ಆಧಾರ ಇಲ್ಲದೇ ಸಿದ್ದರಾಮಯ್ಯ ಸರ್ಕಾರ ಎಟಿಎಂ ಅಂದಿದ್ದರು. ಈಗ ಏನ್ ಹೇಳುತ್ತೀರಾ ಮಿಸ್ಟರ್ ಶಾ ಎಂದು ಪ್ರಶ್ನೆ ಮಾಡಿದರು.
ಲೋಕಾಯುಕ್ತ ಬಲೆಗೆ ಬಿದ್ದಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನವಾಗಬೇಕು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ನೀಡಬೇಕೆಂದು ಅವರು ಆಗ್ರಹಿಸಿದರು.