ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್’ಎಸ್ ಕಾವೇರಿ ನೀರಾವರಿ ನಿಗಮದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ವಜಾಗೊಂಡಿರುವ ನೌಕರರು ಜು.13ರಂದು ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪದ ಮಹಾತ್ಮ ಗಾಂಧೀ ಪ್ರತಿಮೆ ಬಳಿ ಶಾಂತಿಯುತವಾಗಿ ಅರೆಬೆತ್ತಲೆ ಪ್ರತಿಭಟನೆ ನಡೆಸಲಿದ್ದಾರೆ.
ಕೆ.ಆರ್.ಎಸ್ ಬೃಂದಾವನದ ಉದ್ಯಾನವನದಲ್ಲಿ ಹೊರಗುತ್ತಿಗೆಯಲ್ಲಿ ಸ್ವಚ್ಛತಾ ಮತ್ತು ನಿರ್ವಹಣಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಮಹದೇವ, ಕೃಷ್ಣ, ರವಿ.ಎಂ.ಎಸ್.ರತೀಶ್.ಎನ್, ಮೋಹನ ಮತ್ತು ಅನಿಲ್.ಜಿ ಎಂಬುವರನ್ನು ಕಳೆದ ಜೂ.9ರಂದು ಏಕಾಏಕಿ ಯಾವುದೇ ನೋಟಿಸ್ ಹಾಗೂ ಮಾಹಿತಿ ನೀಡದೇ ರಾಜಕೀಯ ದುರುದ್ದೇಶದಿಂದ ಕೆಲಸದಿಂದ ವಜಾ ಮಾಡಲಾಗಿದೆ ಎಂದು ನೌಕರರು ದೂರಿದ್ದಾರೆ.
ಶಾಸಕರ ಮೌಖಿಕ ಆದೇಶದ ಮೇರೆಗೆ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ತಮ್ಮನ್ನು ಕೆಲಸದಿಂದ ತೆಗೆದು ದೌರ್ಜನ್ಯ ಎಸಗಿದ್ದಾರೆ. ಬೃಂದಾವನದಲ್ಲಿ ಕಾರ್ಯನಿರ್ವಹಿಸುತ್ತಿದ್ದ 130 ಕ್ಕೂ ಹೆಚ್ಚು ನೌಕರರಿಗೆ ಕಳೆದ 6 ತಿ೦ಗಳುಗಳಿಂದ ಸಂಬಳ ನೀಡದಿರುವ ಬಗ್ಗೆ ಕಳೆದ ಮೂರು ದಿನಗಳಿಂದ ಕೆ.ಆರ್.ಎಸ್ ಕಾವೇರಿ ನೀರಾವರಿ ನಿಗಮದ ಮುಂದೆ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದರೂ, ತಮಗೆ ಯಾವುದೇ ನ್ಯಾಯ ಸಿಗದ ಕಾರಣ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆಂದು ಗುತ್ತಿಗೆ ನೌಕರರು ತಿಳಿಸಿದ್ದಾರೆ.