ಆಡಳಿತರೂಢ ಬಿಜೆಪಿ ಪಕ್ಷದ ದುರಾಡಳಿತ ಮತ್ತು ಭ್ರಷ್ಟಾಚಾರ, ಬೆಲೆ ಏರಿಕೆ, ಅವೈಜ್ಞಾನಿಕ ತೆರಿಗೆ ನೀತಿ ಹಾಗೂ ದಲಿತರ ಅಭಿವೃದ್ಧಿಗೆ ಮಾರಕವಾಗಿರುವ ನೀತಿಗಳನ್ನು ಖಂಡಿಸಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಲವು ಜನಪರ ಗ್ಯಾರಂಟಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎನ್.ರಾಜೇಂದ್ರ ಬಾಬು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ವಲಯದ ಉದ್ಯಮಗಳನ್ನು ಸರ್ಕಾರಿ ಶಾಲೆಗಳನ್ನು ಸಹ ಮುಚ್ಚಿ ಶೋಷಿತ ಸಮುದಾಯಗಳ ಮೇಲೆ ಮರಣ ಶಾಸನ ಬರೆಯುತ್ತಿರುವ ಬಿಜೆಪಿ ಸರ್ಕಾರವನ್ನು ಈ ಬಾರಿ ಸೋಲಿಸಲು ಎಲ್ಲ ಪ್ರಗತಿಪರ ದಲಿತಪರ ಜಾತ್ಯತೀತ ಮನೋಭಾವ ಉಳ್ಳವರು ಕೋಮುವಾದಿ ಭ್ರಷ್ಟಾಚಾರ ಸರ್ಕಾರವನ್ನು ಸೋಲಿಸಲು ತೀರ್ಮಾನಿಸಬೇಕೆಂದರು.
ಕೇಂದ್ರದ ಸರ್ಕಾರದ ಆಡಳಿತ ನಡೆಸುತ್ತಿರುವ 75 ವರ್ಷದ ಅವಧಿಯಲ್ಲಿ ಇದ್ದಂತಹ ಸಾಲವನ್ನು ಅದರ ಎರಡ ಪಟ್ಟು ಅಂದರೆ ಎಂಟು ವರ್ಷದಲ್ಲಿ ಈಗಿನ ಕೇಂದ್ರ ಸರ್ಕಾರ ನೂರು ಲಕ್ಷ ಸಾವಿರ ಕೋಟಿ ಹಣವನ್ನು ಸಾಲ ಮಾಡುವುದರ ಮೂಲಕ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ ಒಂದು ಲಕ್ಷದಷ್ಟು ಹೊರೆಯನ್ನು ಹೊರಿಸಿದೆ.
ಕಳೆದ ಹತ್ತು ವರ್ಷಗಳಿಂದ ಈಚೆಗೆ 25,000ಕ್ಕೂ ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಚ್ಚು ಯುವ ಜನರು ಉದ್ಯೋಗವಿಲ್ಲದೆ ಸಾವನಪ್ಪಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಶ್ರೀಮಂತರ ಪರವಾದ ಆರ್ಥಿಕ ನೀತಿ ಮುಂದುವರೆಸಿದ ಫಲವಾಗಿ ಬಡವರನ್ನು ಮತ್ತಷ್ಟು ಬಡವರನ್ನಾಗಿ ಬಡತನ ರೇಖೆಗೆ ತಳ್ಳುತ್ತಿರುವಂತಾಗಿದೆ. ಡಬಲ್ ಇಂಜಿನ್ ಸರ್ಕಾರ ಎಂದು ಪ್ರಚಾರ ಮಾಡುತ್ತಿರುವ ಬಿಜೆಪಿ ಸರ್ಕಾರ ಅಭಿವೃದ್ಧಿ ಏನೆಂಬುದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಆಗ್ರಹಿಸಿದರು.
ಅಡಳಿತ ನಡೆಯುತ್ತಿರುವ ಬಿಜೆಪಿ ಸರ್ಕಾರ, ಮೀಸಲಾತಿ ಹೆಸರಿನಲ್ಲಿ ಜಾತಿಗಳನ್ನು ಒಡೆದು ಆಳುವ ರಾಜಕಾರಣವನ್ನು ಮಾಡಲು ಮುಂದಾಗಿ ದಲಿತರ ಕಣ್ಣಿಗೆ ಮಣ್ಣೆರಚಿ ನಾಟಕವಾಡುತ್ತಿದೆ. ಉದಾಹರಣೆಗೆ ರಾಜ್ಯದಲ್ಲಿ ಎಸ್.ಪಿ., ಟಿ.ಎಸ್.ಪಿ ಹಣವನ್ನು 24 ಸಾವಿರ ಕೋಟಿ ಬಳಕೆ ಮಾಡದೆ, ಅದರಲ್ಲಿ 4,000 ಕೋಟಿಯನ್ನು ಬಳಸಿ ಉಳಿದ ಹಣವನ್ನು ಸರ್ಕಾರದಲ್ಲೇ ಉಳಿಸಿಕೊಂಡಿರುವುದು. ದಲಿತರಿಗೆ ಮಾಡಿದ ದ್ರೋಹವಾಗಿದೆ ಎಂದು ದೂರಿದರು.
ಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಚಾಕನಹಳ್ಳಿ, ರಾಜ್ಯ ಉಪಾಧ್ಯಕ್ಷ ಬ್ಯಾಡರಹಳ್ಳಿ ಪ್ರಕಾಶ್ ಮತ್ತು ನಾಗರಾಜು ಉಪಸ್ಥಿತರಿದ್ದರು.